ಹುಬ್ಬಳ್ಳಿ: ಲಾಕ್ಡೌನ್ ಸಡಿಲಿಕೆ ನಂತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಬೆಲೆ ನಿಯಂತ್ರಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಧಾರವಾಡ ಜಿಲ್ಲಾ ಘಟಕದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಪೆಟ್ರೋಲ್, ಡೀಸೆಲ್, ವಿದ್ಯುತ್ ಮತ್ತು ಅಡುಗೆ ಅನಿಲದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ, ದಿನಸಿ ಸಾಮಗ್ರಿಗಳ ಬೆಲೆಯಲ್ಲೂ ಹೆಚ್ಚಳವಾಗುತ್ತಿದೆ. ಕೋವಿಡ್ನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವವರಿಗೆ ಇದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಬಡ ಮತ್ತು ಶ್ರಮಿಕ ವರ್ಗದವರಿಗೆ ಪರಿಹಾರ ಘೋಷಿಸಿ ಆಸರೆಯಾಗಿದ್ದೇವೆ ಎಂದು ಹೇಳುವ ಸರ್ಕಾರಕ್ಕೆ, ಬೆಲೆ ಏರಿಕೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ದಿನಸಿ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ಲಾಕ್ಡೌನ್ನಿಂದ ಹೊಲದಲ್ಲಿಯೇ ಹಾಳಾದ ತರಕಾರಿ ಬೆಳೆಗಳಿಗೆ ಎಕರೆಗೆ ₹25 ಸಾವಿರ ಪರಿಹಾರ ಘೋಷಿಸಬೇಕು. ನರೇಗಾ ಯೋಜನೆ ನಗರ ಪ್ರದೇಶಗಳಿಗೆ ವಿಸ್ತರಿಸಿ, 200 ದಿನ ಕೆಲಸ ನೀಡಬೇಕು. ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬಿ.ಎ. ಮುಧೋಳ, ಎ.ಎಸ್. ಪಿರಜಾದೆ, ಬಾಬಾಜಾನ್ ಮುಧೋಳ, ದೇವಾನಂದ ಜಗಾಪುರ, ರಮೇಶ ಭೋಸ್ಲೆ, ಗೀತಾ ಕಡಗಿ, ಬಸಮ್ಮಾ ಇಚ್ಚಂಗಿ, ಬಶೀರ ಮುಲ್ಲಾ, ಎಂ.ಎಚ್. ಹುಲಮನಿ, ಎನ್.ಐ. ನದಾಫ್, ಸಾಜಿದ್ ಹಾಲಭಾವಿ, ಶೋಭಾ ಹಡಪದ, ಎಂ.ಎ. ಮುಲ್ಲಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.