ADVERTISEMENT

ಕೋವಿಡ್‌–19 | ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ದರ ಪಡೆಯುವಂತಿಲ್ಲ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 9:31 IST
Last Updated 14 ಆಗಸ್ಟ್ 2020, 9:31 IST
   

ಹುಬ್ಬಳ್ಳಿ: ಕೋವಿಡ್‌–19 ಚಿಕಿತ್ಸೆಗೆ ಸರ್ಕಾರ ನಿಗದಿ ಪಡಿಸಿದ ದರವನ್ನೇ ತೆಗೆದುಕೊಳ್ಳಬೇಕು. ಸರ್ಕಾರದ ವತಿಯಿಂದ ದಾಖಲಾದ ರೋಗಿಗಳ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹೇಳಿದರು.

ಮಜೇಥಿಯಾ ಫೌಂಡೇಷನ್‌ ವತಿಯಿಂದ ನಿರ್ಮಿಸಿರುವ ರಮಿಲಾ ಪ್ರಶಾಂತಿ ಮಂದಿರದ 60 ಹಾಸಿಗೆ ಕೋವಿಡ್‌ ಆರೋಗ್ಯ ಕೇಂದ್ರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳವರು 750 ಹಾಸಿಗೆಗಳನ್ನು ನೀಡಿದ್ದಾರೆ. ಖಾಸಗಿ ಆಸ್ಪತ್ರೆಗಳವರೂ ಕೈ ಜೋಡಿಸಬೇಕು ಎಂದರು.

ಲಕ್ಷಣ ರಹಿತ ರೋಗಿಗಳಾದವರು ಪ್ರತ್ಯೇಕ ಕೊಠಡಿಗಳನ್ನು ಕೇಳುತ್ತಿದ್ದಾರೆ. ಹಾಗಾಗಿ, ಹೋಟೆಲ್‌ ಸಂಘದವರೊಂದಿಗೆ ಮಾತುಕತೆ ನಡೆಸಿದ್ದೇವೆ. ಮಜೇಥಿಯಾ ಫೌಂಡೇಷನ್‌ನವರ 60 ಹಾಸಿಗೆಗಳನ್ನು ಒದಗಿಸುವ ಮೂಲಕ ಒಳ್ಳೆಯ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ADVERTISEMENT

ಮಜೇಥಿಯಾ ಫೌಂಡೇಷನ್‌ ಚೇರಮನ್‌ ಜಿತೇಂದ್ರ ಮಜೇಥಿಯಾ ಮಾತನಾಡಿ, ಕ್ಯಾನ್ಸರ್‌ ರೋಗಿಗಳಿಗಾಗಿ ಈ ಭಾಗದಲ್ಲಿಯೇ ಉತ್ತಮವಾದ ಹಾಸ್ಪೈಸ್‌ ಕೇಂದ್ರ ನಿರ್ಮಿಸುತ್ತಿದ್ದೇವೆ. ಮಾನವೀಯತೆ ದೃಷ್ಟಿಯಿಂದ ಫೌಂಡೇಷನ್‌ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದೆ ಎಂದರು.

ಗಣೇಶ ಮಹಾಮಂಡಳದಿಂದ ಪ್ರತಿ ವರ್ಷ ಗಣೇಶ ಉತ್ಸವಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿತ್ತು. ಈ ವರ್ಷ ಅದನ್ನು ಕೋವಿಡ್‌–19 ನಿಯಂತ್ರಣದ ಕಾರ್ಯಕ್ಕೆ ಬಳಕೆ ಮಾಡಲಾಗುವುದು ಎಂದು ಹೇಳಿದರು.

ಹುಬ್ಬಳ್ಳಿ–ಧಾರವಾಡದಲ್ಲಿ ಸೌಲಭ್ಯದ ಕೊರತೆ ಇದೆ. ಸರ್ಕಾರದ ಅನುದಾನ ಹಾಗೂ ಕಂಪನಿಗಳ ಸಿಎಸ್‌ಆರ್‌ ಅನುದಾನ ಬಳಸಿಕೊಂಡು ಅಭಿವೃದ್ಧ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.

ಕೆಸಿಟಿಆರ್‌ಐ ನಿರ್ದೇಶಕ ಡಾ.ಬಿ.ಆರ್‌. ಪಾಟೀಲ ಮಾತನಾಡಿ, 43 ವರ್ಷಗಳಿಂದ ಬಡ ಕ್ಯಾನ್ಸರ್‌ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವಾರು ದಾನಿಗಳು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ ಎಂದರು.

ಮಜೇಥಿಯಾ ಫೌಂಡೇಷನ್‌ ನೆರವಿನಿಂದ ಕೋವಿಡ್‌–19 ಚಿಕಿತ್ಸೆಗೆ ಪ್ರತ್ಯೇಕ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿದೆ. ಸಿಬ್ಬಂದಿ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಉತ್ತಮ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ಫೌಂಡೇಷನ್‌ ಅಧ್ಯಕ್ಷೆ ನಂದಿನಿ ಕಶ್ಯಪ್‌ ಮಜೇಥಿಯಾ, ರಮಿಲಾ ಮಜೇಥಿಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.