ಹುಬ್ಬಳ್ಳಿ: ‘ನಮ್ಮ ಮನೆಯಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ನಾನೂ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಒಳಗಾದೆ. ಮೊದಲ ವರದಿ ನೆಗೆಟಿವ್ ಬಂದರೂ, ಎರಡನೇ ವರದಿಯಲ್ಲಿ ಸೋಂಕು ದೃಢಪಟ್ಟಿತು. ನನ್ನಲ್ಲಿ ಕೊರೊನಾದ ಯಾವ ಲಕ್ಷಣಗಳು ಇಲ್ಲದಿದ್ದರೂ ಸೋಂಕು ಹೇಗೆ ಅಂಟಿಕೊಂಡಿತು ಎನ್ನುವುದೇ ಅಚ್ಚರಿಯಾಯಿತು. ಲಕ್ಷಣಗಳು ಇಲ್ಲದ್ದರಿಂದ ಮನೆಯಲ್ಲೇ ಚಿಕಿತ್ಸೆ ಪಡೆದು ಪೂರ್ಣ ಗುಣಮುಖವಾಗಿದ್ದೇನೆ...’
ಕೋವಿಡ್ ಗೆದ್ದಿರುವ ಸದಾಶಿವ ನಗರದ ಗೃಹಿಣಿಯೊಬ್ಬರ ಮಾತುಗಳು ಇವು. ಸೋಂಕಿನಿಂದ ಪೂರ್ಣವಾಗಿ ಚೇತರಿಸಿಕೊಂಡಿದ್ದರೂ ನಾನು ಕೆಲಸ ಮಾಡುವ ಕಚೇರಿ ಹಾಗೂ ಸುತ್ತಮುತ್ತಲಿನ ಜನ ಗೌರವದಿಂದ ಕಾಣುವುದಿಲ್ಲ. ಕೊರೊನಾ, ಇನ್ನೊಬ್ಬರನ್ನು ಕೀಳಾಗಿ ಕಾಣುವಷ್ಟು ಗಂಭೀರ ಕಾಯಿಲೆ ಅಲ್ಲ ಎನ್ನುವ ಅರಿವು ನಮ್ಮ ಜನರಿಗೆ ಇನ್ನೂ ಆಗಿಲ್ಲ. ಆದ್ದರಿಂದ ನನ್ನ ಹೆಸರು ಹೇಳಲು ಬಯಸುತ್ತಿಲ್ಲ ಎಂದರು.
ನನ್ನ ಪತಿ ಹಾಗೂ ಮಗನಿಗೆ ಸೋಂಕು ಖಚಿತವಾಗಿದ್ದರಿಂದ ಅವರು ಆಸ್ಪತ್ರೆಗೆ ದಾಖಲಾದರು. ಮನೆಯಲ್ಲಿ ನಾನೊಬ್ಬಳೇ ಇದ್ದರಿಂದ ಮನೆಯಲ್ಲಿದ್ದುಕೊಂಡೇ ಗುಣಮುಖವಾಗಿದ್ದೇನೆ. ಸೋಂಕು ದೃಢಪಟ್ಟಾಗ ಆಸ್ಪತ್ರೆ ಸಿಬ್ಬಂದಿ ಮನೆಯಲ್ಲಿ ಇದ್ದರೆ ನಿಮ್ಮ ಜೀವಕ್ಕೆ ನೀವೇ ಹೊಣೆ ಎಂದು ಹೇಳಿದರು. ಇದನ್ನು ಸವಾಲಾಗಿ ಸ್ವೀಕರಿಸಿ ಏನೇ ಆದರೂ ಮನೆಯಲ್ಲೇ ಚಿಕಿತ್ಸೆ ಪಡೆಯಲು ಗಟ್ಟಿ ಧೈರ್ಯ ಮಾಡಿದೆ ಎಂದರು.
ನಿತ್ಯ ಬೆಳಿಗ್ಗೆ ಒಂದು ಲೀಟರ್ ಬಿಸಿ ನೀರಿನಲ್ಲಿ ತುಳಸಿ ಅಥವಾ ತುಳಸಿ ಪುಡಿ ಮಿಶ್ರಣ ಮಾಡಿ ಕುಡಿಯುತ್ತಿದ್ದೆ. ವಿಟಮಿನ್ ಸಿ ಅಂಶ ಹೊಂದಿರುವ ಹುಳಿಯ ಪದಾರ್ಥಗಳನ್ನು (ಲಿಂಬೆಹಣ್ಣು) ಹೆಚ್ಚಾಗಿ ತಿನ್ನುತ್ತಿದ್ದೆ. ಕಷಾಯ ಕುಡಿದು, ಬಿಸಿಬಿಸಿಯಾದ ಅಡುಗೆ ಊಟ ಮಾಡುತ್ತಿದ್ದೆ. ಮೂರ್ನಾಲ್ಕು ದಿನಗಳಲ್ಲಿ ಪೂರ್ಣ ಗುಣಮುಖವಾಗಿದ್ದೇನೆ ಎಂದು ಕೋವಿಡ್ ಎದುರಿಸಿದ ರೀತಿ ವಿವರಿಸಿದರು.
ಲಕ್ಷಣಗಳು ಇಲ್ಲದಿದ್ದರೆ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಕೊರೊನಾಸೋಂಕಿತರಲ್ಲಿ ವಿನಾಕಾರಣ ಭಯ ಹುಟ್ಟಿಸಲಾಗುತ್ತಿದೆ. ಯಾರೂ ಭಯಪಡುವ ಅಗತ್ಯವೇ ಇಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.