ADVERTISEMENT

ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ: ಪ್ರಣವಾನಂದ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 14:27 IST
Last Updated 25 ಜುಲೈ 2022, 14:27 IST
ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ    

ಹುಬ್ಬಳ್ಳಿ: ‘ರಾಜ್ಯದ ಹಿಂದುಳಿದ ಸಮುದಾಯಗಳಾದ ಈಡಿಗ, ಬಿಲ್ಲವ, ನಾಮಧಾರಿ, ದೀವರ ಹಾಗೂ ಇತರ ಒಳಪಂಗಡಗಳ ಅಭಿವೃದ್ಧಿಗಾಗಿ ಕೂಡಲೇ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ₹500 ಕೋಟಿ ನಿಧಿಯನ್ನು ಮೀಸಲಿಡಬೇಕು’ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

‘ನಮ್ಮ ಸಮುದಾಯದ 26 ಒಳಪಂಗಡಗಳ ಒಟ್ಟು 70 ಲಕ್ಷ ಜನ ರಾಜ್ಯದಲ್ಲಿದ್ದಾರೆ. ಹಲವು ಕ್ಷೇತ್ರಗಳಲ್ಲಿ ನಾವು ನಿರ್ಣಾಯಕ ಸಂಖ್ಯೆಯಲ್ಲಿದ್ದೇವೆ. ಆದರೂ, ನಿಗಮ ಸ್ಥಾಪಿಸುವಂತೆ ನಾವು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ರಾಜ್ಯ ಸರ್ಕಾರ ಕೂಡಲೇ ನಮ್ಮ ಬೇಡಿಕೆಗೆ ಸ್ಪಂದಿಸಬೇಕು’ ಎಂದು ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಮುದಾಯದ ಕುಲಕಸುಬಾದ ಸೇಂದಿ ಮಾರಾಟವನ್ನು ಎರಡು ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಕಡೆ 2004ರಲ್ಲಿ ಬಂದ್ ಮಾಡಿದ್ದರಿಂದ ಸಮಾಜದ ಜನ ಕಷ್ಟದಲ್ಲಿದ್ದಾರೆ. ಸದ್ಯ ಮಂಗಳೂರು ಮತ್ತು ಉಡುಪಿಯಲ್ಲಿ ಮಾತ್ರ ಮಾರಾಟಕ್ಕೆ ಅವಕಾಶವಿದೆ. ‍ಪಕ್ಕದ ಗೋವಾ, ತೆಲಂಗಾಣ ಹಾಗೂ ಕೇರಳದಲ್ಲಿ ಸೇಂದಿ ಮಾರಾಟಕ್ಕೆ ಅವಕಾಶ ನೀಡಿರುವಂತೆ ಕರ್ನಾಟಕದಲ್ಲೂ ಎಲ್ಲ ಕಡೆ ಅವಕಾಶ ನೀಡಬೇಕು’ ಎಂದರು‌.

ADVERTISEMENT

‘ಈಗಾಗಲೇ ಕೆಲ ಸಮುದಾಯಗಳು 2ಎ ಪ್ರವರ್ಗಕ್ಕೆ ತಮ್ಮನ್ನು ಸೇರಿಸುವಂತೆ ಹೋರಾಟ ಮಾಡುತ್ತಿವೆ. ನಮ್ಮ ಸಮುದಾಯವೂ 2ಎ ಪ್ರವರ್ಗದಲ್ಲಿದೆ. ಸರ್ಕಾರವೇನಾದರೂ ಅವರ ಬೇಡಿಕೆಗೆ ಸ್ಪಂದಿಸಿದರೆ ನಮ್ಮ ಮೀಸಲಾತಿಗೆ ತೊಂದರೆಯಾಗಲಿದೆ. ಹೀಗಾಗಿ, ನಮ್ಮನ್ನು ಪ್ರವರ್ಗ 1ಕ್ಕೆ ಸೇರಿಸಬೇಕು. ಈ ಕುರಿತು ಅಧ್ಯಯನಕ್ಕಾಗಿ ಆಂತರಿಕವಾಗಿ ಒಂದು ಸಮಿತಿಯನ್ನು ರಚಿಸಲಾಗಿದೆ’ ಎಂದರು.

‘ಸರ್ಕಾರದಲ್ಲಿ ನಮ್ಮ ಸಮುದಾಯದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನೀಲಕುಮಾರ್ ಸೇರಿದಂತೆ ಏಳು ಜನಪ್ರತಿನಿಧಿಗಳಿದ್ದಾರೆ. ಜುಲೈ 30ರೊಳಗಾಗಿ ಮುಖ್ಯಮಂತ್ರಿ ಜೊತೆ ನಮ್ಮ ಬೇಡಿಕೆ ಕುರಿತು ಚರ್ಚಿಸಿ ಈಡೇರಿಸುವ ಭರವಸೆ ನೀಡಿದ್ದಾರೆ. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹೆಸರು ಇಡಬೇಕು’ ಎಂದು ಒತ್ತಾಯಿಸಿದರು.

ಹೋರಾಟ ಸಮಿತಿಯ ಸತೀಶ‌ ಗುತ್ತೇದಾರ, ವೆಂಕಟೇಶ ಗುಂಡನವರ, ಟಿ.ಡಿ. ನಾಯಕ, ಪದ್ಮನಾಭ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.