ಹುಬ್ಬಳ್ಳಿ: ತನ್ನ ಪ್ರೇಯಸಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಯುವಕನನ್ನು ಪ್ರೇಮಿಯೊಬ್ಬ ಕೊಲೆ ಮಾಡಿದ್ದಾನೆ. ಹಳೇ ಹುಬ್ಬಳ್ಳಿ ಇಂದ್ರಪ್ರಸ್ಥ ನಗರದ ವಿನಯ ಹೇಮಂತ ಮೇಘರಾಜ (20) ಕೊಲೆಯಾದ ಯುವಕ. ನವನಗರ ಸಮೀಪದ ಸುತಗಟ್ಟಿಯ ಹೊರವಲಯದಲ್ಲಿ ಬುಧವಾರ ಘಟನೆ ನಡೆದಿದ್ದು, ಆರೋಪಿ ನವನಗರದ ರಾಘವೇಂದ್ರ ಕಮತರನನ್ನು ಎಪಿಎಂಸಿ–ನವನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಧಾರವಾಡದ ಕಾಲೇಜೊಂದರಲ್ಲಿ ಆರೋಪಿ ರಾಘವೇಂದ್ರ ಪ್ರೀತಿಸುತ್ತಿದ್ದ ಯುವತಿ ಮತ್ತು ವಿನಯ ಡಿಪ್ಲೊಮಾ ಓದುತ್ತಿದ್ದರು. ಇತ್ತೀಚೆಗೆ ಯುವತಿಯೊಂದಿಗೆ ವಿನಯ ಸಲುಗೆ ಬೆಳೆಸಿಕೊಂಡಿದ್ದಕ್ಕೆ ಕುಪಿತನಾಗಿದ್ದ ಆರೋಪಿ, ತನ್ನ ಪ್ರೇಯಸಿಯೊಂದಿಗೆ ಮಾತನಾಡದಂತೆ ಎಚ್ಚರಿಕೆ ನೀಡಿದ್ದ.
ಆದರೂ, ಇಬ್ಬರೂ ನಡುವೆ ಸಲುಗೆ ಮುಂದುವರಿದ್ದನ್ನು ನೋಡಿ ಕೋಪಗೊಂಡ ರಾಘವೇಂದ್ರ, ಮಾತನಾಡುವ ನೆಪದಲ್ಲಿ ವಿನಯನನ್ನು ಸುತಗಟ್ಟಿ ಹೊರವಲಯಕ್ಕೆ ಬುಧವಾರ ಸಂಜೆ ಕರೆದುಕೊಂಡು ಹೋಗಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮಾರನೇಯ ದಿನ ಸ್ಥಳೀಯರು ಮೃತದೇಹವನ್ನು ಗಮನಿಸಿ ಠಾಣೆಗೆ ವಿಷಯ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.