ADVERTISEMENT

‘ಬೆಳೆ ವಿವರ ದಾಖಲಿಸಲು ರೈತರಿಗೂ ಅವಕಾಶ’

’ಖಾಸಗಿ ನಿವಾಸಿ’ಗಳಿಗೆ ಮೊಬೈಲ್‌ ಆ್ಯ‍ಪ್‌ ಮೂಲಕ ಬೆಳೆ ಸಮೀಕ್ಷೆ ತರಬೇತಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 4:27 IST
Last Updated 8 ಜುಲೈ 2025, 4:27 IST
ಹುಬ್ಬಳ್ಳಿ ತಾಲ್ಲೂಕಿನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲು ಕೃಷಿ ಇಲಾಖೆಯಿಂದ ನೇಮಕವಾದ ‘ಖಾಸಗಿ ನಿವಾಸಿ’ಗಳಿಗೆ ತರಬೇತಿ ನೀಡಿದ ನಂತರ ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಮಹೇಶ ಗಸ್ತೆ ಅವರ ಮೂಲಕ ರೇನ್‌ ಕೋಟ್‌, ಶೂ ಹಾಗೂ ಬ್ಯಾಗ್‌ ಪರಿಕರಗಳನ್ನು ಸೋಮವಾರ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು
ಹುಬ್ಬಳ್ಳಿ ತಾಲ್ಲೂಕಿನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲು ಕೃಷಿ ಇಲಾಖೆಯಿಂದ ನೇಮಕವಾದ ‘ಖಾಸಗಿ ನಿವಾಸಿ’ಗಳಿಗೆ ತರಬೇತಿ ನೀಡಿದ ನಂತರ ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಮಹೇಶ ಗಸ್ತೆ ಅವರ ಮೂಲಕ ರೇನ್‌ ಕೋಟ್‌, ಶೂ ಹಾಗೂ ಬ್ಯಾಗ್‌ ಪರಿಕರಗಳನ್ನು ಸೋಮವಾರ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು   

ಹುಬ್ಬಳ್ಳಿ: ಮುಂಗಾರು ಹಂಗಾಮಿನಲ್ಲಿ ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ಕಾರ್ಯಕ್ಕೆ ಕೃಷಿ ಇಲಾಖೆಗೆ ನೆರವಾಗಲು ‘ನನ್ನ ಬೆಳೆ ನನ್ನ ಹಕ್ಕು’ ಯೋಜನೆಯಡಿ ನೇಮಕಗೊಳಿಸಿದ ’ಖಾಸಗಿ ನಿವಾಸಿ’ಗಳಿಗೆ ಏರ್ಪಡಿಸಿದ್ದ ತರಬೇತಿಯು ಸೋಮವಾರ ಪೂರ್ಣಗೊಂಡಿತು.

ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಕಚೇರಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ತಹಶೀಲ್ದಾರ್‌ ಮಹೇಶ ಗಸ್ತೆ ಅವರು ‘ಖಾಸಗಿ ನಿವಾಸಿ’ಗಳಿಗೆ ಸಮೀಕ್ಷಾ ಕಾರ್ಯಕ್ಕೆ ನೆರವಾಗಲು ರೇನ್‌ ಕೋಟ್‌, ಶೂ ಹಾಗೂ ಬ್ಯಾಗ್‌ಗಳನ್ನು ವಿತರಿಸಿದರು.

ಆನಂತರ ಮಾತನಾಡಿದ ಅವರು, ಬೆಳೆ ಸಮೀಕ್ಷೆ ಕಾರ್ಯ ಕಳೆದ ಜೂನ್ 20 ರಿಂದ ಆರಂಭವಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಬೆಳೆ ಸಮೀಕ್ಷೆಗೆ ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆ ವಿವರಗಳನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ‘ಫಾರ್ಮರ್‌ ಆ್ಯಪ್‌ ಫಾರ್‌ ಕಾರೀಫ್‌–2025’ (ಮುಂಗಾರು ರೈತರ ಬೆಳೆ ಸಮೀಕ್ಷೆ–2025) ಹೆಸರಿನ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮೊಬೈಲ್ ಆ್ಯಪ್‌ ಬಳಕೆ ಮಾಡುವ ರೀತಿಯನ್ನು ರೈತರಿಗೆ ತಿಳಿಸಲು ಪ್ರತಿ ಗ್ರಾಮದಲ್ಲಿ ನುರಿತ ‘ಖಾಸಗಿ ನಿವಾಸಿ’ಗಳನ್ನು ನೇಮಿಸಲಾಗಿರುತ್ತದೆ ಎಂದರು.

ADVERTISEMENT

ಅತ್ಯಂತ ನಿಖರವಾಗಿ ಹಾಗೂ ನಿಗದಿತ ಸಮಯದಲ್ಲೆ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲು ‘ಖಾಸಗಿ ನಿವಾಸಿ’ಗಳು ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದರು.

ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ ತೆಂಬದ ಮಾತನಾಡಿ, ಬೆಳೆ ಸಮೀಕ್ಷೆ ನಿಖರವಾಗಿ ದಾಖಲಿಸುವುದರಿಂದ ರೈತರಿಗೆ ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕನಿಷ್ಠ ಬೆಂಬಲ ಯೋಜನೆಯಡಿ (ಎಂಎಸ್‌ಪಿ) ಆರ್ಹ ಫಲಾನುಭವಿಗಳನ್ನು ಗುರುತಿಸಲು, ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು, ಬೆಳೆಹಾನಿಗೆ ಪರಿಹಾರ ವಿತರಿಸಲು, ಬೆಳೆ ಕಟಾವು ಪ್ರಯೋಗ ಕೈಗೊಳ್ಳಲು, ಬೆಳೆ ವಿಸ್ತೀರ್ಣದ ವರದಿ ಕಾರ್ಯ, ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು, ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಫಲಾನುಭವಿ ಆಧಾರಿತ ಯೋಜನೆಗಳನ್ನು ಅನುಷ್ಠಾನ ಮಾಡಲು ಬೆಳೆ ಸಮೀಕ್ಷೆ ಅವಶ್ಯಕವಾಗಿರುತ್ತದೆ ಎಂದು ತಿಳಿಸಿದರು.

ಕೃಷಿ ಅಧಿಕಾರಿಗಳಾದ ಎಂ.ಜಿ. ಜೋರಮ್ಮನವರ, ಆತ್ಮಾ ಸಿಬ್ಬಂದಿ ಸುಚೇತಾ ಬಾಗೇವಾಡಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಪ್ರಭುಲಿಂಗ ಗಡ್ಡದ, ಹರೀಶ ಎಕ್ಕಿಹಳ್ಳಿಮಠ, ಕಂದಾಯ ನೀರಿಕ್ಷಕ ರವಿ ಬೆನ್ನೂರ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.