ADVERTISEMENT

ಪತ್ರಿಕಾ ವಿತರಕರ ನಿಗಮ ಸ್ಥಾಪನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 16:24 IST
Last Updated 17 ಜನವರಿ 2022, 16:24 IST
ಧಾರವಾಡದ ಶ್ರೀನಗರ ಬಳಿ ಇರುವ ಶಿವಾಲಯದಲ್ಲಿ ಸೋಮವಾರ ನಡೆದ ಪತ್ರಿಕಾ ವಿತರಕರ ಸಭೆಯಲ್ಲಿ ಕೆ.ಶಂಭುಲಿಂಗ ಅವರು ಮಾತನಾಡಿದರು
ಧಾರವಾಡದ ಶ್ರೀನಗರ ಬಳಿ ಇರುವ ಶಿವಾಲಯದಲ್ಲಿ ಸೋಮವಾರ ನಡೆದ ಪತ್ರಿಕಾ ವಿತರಕರ ಸಭೆಯಲ್ಲಿ ಕೆ.ಶಂಭುಲಿಂಗ ಅವರು ಮಾತನಾಡಿದರು   

ಧಾರವಾಡ: ‘ರಾಜ್ಯದಲ್ಲಿ ಅಸಂಘಟಿತರಾಗಿ ನಿತ್ಯ ದುಡಿಯುತ್ತಿರುವ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ ಸರ್ಕಾರ ನಿಗಮ ಸ್ಥಾಪಿಸಬೇಕು’ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ. ಶಂಭುಲಿಂಗ ಆಗ್ರಹಿಸಿದರು.

ಹುಬ್ಬಳ್ಳಿ ಧಾರವಾಡ ಪತ್ರಿಕಾ ವಿತರಕರ ಸಭೆಯಲ್ಲಿ ಅವರು ಸೋಮವಾರ ಮಾತನಾಡಿದರು.

‘ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪತ್ರಿಕಾ ವಿತರಕರು ತಮ್ಮ ಜೀವದ ಹಂಗು ತೊರೆದು ಮನೆಮನೆಗೆ ಪತ್ರಿಕೆ ತಲುಪಿಸುವಲ್ಲಿ ಅವಿರತವಾಗಿ ದುಡಿಯುತ್ತಿದ್ದಾರೆ. ಚಳಿ, ಮಳೆ ಏನೇ ಇದ್ದರೂ ಪ್ರತಿ ಮನೆಗೂ ಸರಿಯಾದ ಸಮಯಕ್ಕೆ ಸುದ್ದಿ ಪತ್ರಿಕೆ ತಲುಪಿಸುವ ಕಾಯಕವನ್ನು ಮಾಡುತ್ತಿದ್ದರೂ ಇವರಿಗೆ ಭದ್ರತೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಸೌಲಭ್ಯಗಳನ್ನು ಕೇಳುವ ಅಗತ್ಯವಿದೆ’ ಎಂದರು.

ADVERTISEMENT

‘ಹಿಂದಿನ ಸರ್ಕಾರವು ಪತ್ರಿಕಾ ವಿತರಕರಿಗಾಗಿ ₹2ಕೋಟಿ ಮೀಸಲಿಟ್ಟಿದರೂ, ಅದು ಅರ್ಹರಿಗೆ ತಲುಪಲಿಲ್ಲ. ಈಗ ಇಡೀ ರಾಜ್ಯದ ಪ್ರತಿ ಸಂಘಟನೆಗಳ ಸದಸ್ಯರೂ ಒಕ್ಕೂಟದ ಸದಸ್ಯರಾಗುವ ಮೂಲಕ ವಿತರಕರ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ನೀಡುವ ಇ–ಶ್ರಮ ಗುರುತಿನ ಚೀಟಿ ಪಡೆಯಲು ಪತ್ರಿಕಾ ವಿತರಕರು ತಮ್ಮ ಹೆಸರುಗಳನ್ನು ಸೇರಿಸಬೇಕು’ ಎಂದು ಸಲಹೆ ನೀಡಿದರು.

ಧಾರವಾಡ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶಿವು ಹಲಗಿ, ಹುಬ್ಬಳ್ಳಿ ಸಂಘದ ಅಧ್ಯಕ್ಷ ಪಿ.ಎಸ್. ಹಿರೇಮಠ, ಗೋವಿಂದ ಶಿರಗುಪ್ಪಿ, ನಾಗರಾಜ ಕುಲಕರ್ಣಿ, ಚಂದ್ರಶಖರ ಬೇಲೂರ, ಕೃಷ್ಣ ಕುಲಕರ್ಣಿ, ಬಸವರಾಜ ಗೋಂದಿ, ವೆಂಕಟೇಶ ಮೊದಲಿಯಾರ್, ಮಂಜು ಹಿರೇಮಠ ಇದ್ದರು. ಹಾವೇರಿ, ಶಿಗ್ಗಾವಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರಿನ ಸಂಘಗಳ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.