ADVERTISEMENT

55 ಕಿ.ಮೀ ಉದ್ದದ ಮಾನವ ಸರಪಳಿ: ಡಿ.ಸಿ

15 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 16:09 IST
Last Updated 5 ಸೆಪ್ಟೆಂಬರ್ 2024, 16:09 IST
ಧಾರವಾಡದಲ್ಲಿ ಗುರುವಾರ ನಡೆದ ಸಭೆಯಲ್ಲಿ ದಿವ್ಯಪ್ರಭು ಮಾತನಾಡಿದರು
ಧಾರವಾಡದಲ್ಲಿ ಗುರುವಾರ ನಡೆದ ಸಭೆಯಲ್ಲಿ ದಿವ್ಯಪ್ರಭು ಮಾತನಾಡಿದರು   

ಧಾರವಾಡ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15ರಂದು ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಾಣಕ್ಕೆ ಸರ್ಕಾರ ನಿರ್ದೇಶನ ನೀಡಿದೆ. ಜಿಲ್ಲೆಯ ತೇಗೂರಿನಿಂದ ಮಾವಿನಕೊಪ್ಪ ಗ್ರಾಮದವರೆಗೆ 55 ಕಿ.ಮೀ ಉದ್ದದ (ಸುಮಾರು 55 ಸಾವಿರ ಜನರಿಂದ) ಮಾನವ ಸರಪಳಿ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ನಿರ್ಮಾಣ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬೆಳಿಗ್ಗೆ 8 ಗಂಟೆಯಿಂದ ಮಾನವ ಸರಪಳಿ ರಚನೆ ಮಾಡಲಗುತ್ತದೆ. ಧಾರವಾಡ ತಾಲ್ಲೂಕಿನ ಮಾವಿನಕೊಪ್ಪ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಮುಂದುವರಿಯುತ್ತದೆ. ಮಾನವ ಸರಪಳಿ ನಿರ್ಮಾನ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಒಂಬತ್ತು ಗ್ರಾಮ ಪಂಚಾಯಿತಿಗಳ 18 ಗ್ರಾಮ ಮತ್ತು ಧಾರವಾಡ ನಗರದಲ್ಲಿ ಮಾನವ ಸರಪಳಿ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು, ಎನ್.ಸಿ.ಸಿ., ಸ್ಕೌಟ್ಸ್, ಗೃಹರಕ್ಷಕ ದಳದವರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು, ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳವರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ADVERTISEMENT

15 ರಂದು ಜಿಲ್ಲೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಮಾನವ ಸರಪಳಿ ಪ್ರಕ್ರಿಯೆ ಆರಂಭವಾಗಿ ಬೆಳಿಗ್ಗೆ 8:30ಕ್ಕೆ ಪೂರ್ಣ ನಿರ್ಮಾಣವಾಗುತ್ತದೆ. ಸಮಾಜಕಲ್ಯಾಣ ಇಲಾಖೆಯು ಗಿನ್ನಿಸ್ ಬುಕ್‌ ಆಫ್ ವರ್ಲ್ಡ್‌ ರೆಕಾರ್ಡ್ ಸಂಸ್ಥೆಯು ಮಾನವ ಸರಪಳಿಯನ್ನು ಬೆಳಿಗ್ಗೆ 8.30 ರಿಂದ 8.40 ರವರೆಗೆ ಚಿತ್ರೀಕರಣ ಮಾಡಲಿದೆ. 8:45 ಗಂಟೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವರು ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ನಡೆಯಲಿದೆ. 9 ಗಂಟೆ ಹೊತ್ತಿಗೆ ಕಾರ್ಯಕ್ರಮ ಮುಗಿಯಲಿದೆ ಎಂದು ವಿವರ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭಾ ಪಾಲ್ಗೊಂಡಿದ್ದರು.

ಧಾರವಾಡದಲ್ಲಿ ಗುರುವಾರ ನಡೆದ ಸಭೆಯಲ್ಲಿ ದಿವ್ಯಪ್ರಭು ಮಾತನಾಡಿದರು

ಮಾನವ ಸರಪಳಿ ಸಂಚಾರ ಮಾರ್ಗ

ಬೆಳಗಾವಿ ಜಿಲ್ಲೆಯ ಕಿತ್ತೂರ ತಾಲ್ಲೂಕಿನ ಮೂಲಕ ಧಾರವಾಡ ಜಿಲ್ಲೆಯ ತೇಗೂರಿನ ಮುಖಾಂತರ ಮಾನವ ಸರಪಳಿ ಇಲ್ಲಿ ಆರಂಭವಾಗುತ್ತದೆ. ತೇಗೂರ ಗುಳೇದಕೊಪ್ಪ ವೆಂಕಟಾಪೂರ ಶಿಂಗನಹಳ್ಳಿ ಕೋಟೂರ ಬೇಲೂರು ಮುಮ್ಮಿಗಟ್ಟಿ ನರೇಂದ್ರ ಜುಬಿಲಿ ವೃತ್ತ ಸಲಕಿನಕೊಪ್ಪ ಬಾಡ ಬೆನಕನಕಟ್ಟಿ ನಿಗದಿ ಬೊಮ್ಮರಸಿಕೊಪ್ಪ ಮುರಕಟ್ಟಿ ಹಳ್ಳಿಗೇರಿ ಹೊಲ್ತಿಕೋಟಿ ಗ್ರಾಮದಿಂದ ಮಾವಿನಕೊಪ್ಪ ಮೂಲಕ ಉತ್ತರ ಕನ್ನಡ ಜಿಲ್ಲಿಯ ಹಳಿಯಾಳ ತಾಲ್ಲೂಕು ತಲುಪುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.