ಹುಬ್ಬಳ್ಳಿ: ‘ಖಾದಿ ಬಟ್ಟೆ ಸೇರಿದಂತೆ, ದೇಸಿ ಉತ್ಪನ್ನಗಳ ಬಳಕೆಯನ್ನು ಎಲ್ಲರೂ ಪ್ರೋತ್ಸಾಹಿಸಬೇಕು’ ಎಂದು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್ ಹೇಳಿದರು.
ನಗರದ ಶಿರೂರು ಪಾರ್ಕ್ನಲ್ಲಿ ಶನಿವಾರ ದೇಸಿ ಅಂಗಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಬ್ರಾಂಡೆಡ್ ಬಟ್ಟೆಗಳ ಅಬ್ಬರದಲ್ಲಿ ಖಾದಿ ಉದ್ಯಮ ಕುಸಿದಿದೆ. ಅಸಂಖ್ಯ ಜನರ ಬದುಕಿಗೆ ದಾರಿಯಾಗಿದ್ದ ಖಾದಿ ಉದ್ಯಮವನ್ನು ಪುನಶ್ಚೇತನಗೊಳಿಸಬೇಕಾದ ಅಗತ್ಯವಿದೆ’ ಎಂದರು.
ಸುಸ್ಥಿರಾಭಿವೃದ್ಧಿ ತಜ್ಞರಾದ ಡಾ. ಪ್ರಕಾಶ್ ಭಟ್ ಮಾತನಾಡಿ, ‘ಹಿಂದೆ ಮನೆ ಮಾತಾಗಿದ್ದ ಖಾದಿ ಬಟ್ಟೆಗಳು ಕ್ರಮೇಣ ಜನಮಾನಸದಿಂದ ದೂರವಾಗಿದ್ದವು. ಜನರು ಇತ್ತೀಚೆಗೆ ಸುಸ್ಥಿರ ಅಭಿವೃದ್ಧಿಯತ್ತ ತನ್ನ ಚಿತ್ತ ಹರಿಸುತ್ತಿದ್ದಾರೆ. ಇದರಿಂದಾಗಿ, ಖಾದಿ ಸೇರಿದಂತೆ ಇತರ ದೇಸಿ ಉತ್ಪನ್ನಗಳ ಮಾರುಕಟ್ಟೆ ನಿಧಾನವಾಗಿ ತೆರೆದುಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ’ ಎಂದು ಹೇಳಿದರು.
ದೇಸಿ ಸಂಸ್ಥೆಯ ಹುಬ್ಬಳ್ಳಿ–ಧಾರವಾಡದ ವಲಯ ವ್ಯವಸ್ಥಾಪಕರಾದ ಸುನಂದಾ ಭಟ್ ಹಾಗೂ ಶಾಖಾ ವ್ಯವಸ್ಥಾಪಲಿ ಸಂಗೀತ ಚಂದಾವರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.