ನವಲಗುಂದ: ಕಣ್ಣು ಹಾಯಿಸಿದಷ್ಟೂ ದೂರ ಜನಜಂಗುಳಿ, ಎಲ್ಲಿ ನೋಡಿದರಲ್ಲಿ ವಾಹನ ದಟ್ಟಣೆ, ಸರತಿ ಸಾಲಿನಲ್ಲಿ ನಿಂತ ಭಕ್ತರು. ಕಾಮಣ್ಣದ ದರ್ಶನಕ್ಕೆ ನೂಕುನುಗ್ಗಲು.
ಇದು ಹೋಳಿ ಹಬ್ಬದ ಅಂಗವಾಗಿ ಇಲ್ಲಿನ ರಾಮಲಿಂಗ ಓಣಿಯಲ್ಲಿ ಪ್ರತಿಷ್ಠಾಪಿಸಲಾದ ರಾಮಲಿಂಗ ಕಾಮದೇವರ ದರ್ಶನದ ವೇಳೆ ಕಂಡು ಬಂದ ಚಿತ್ರಣ. ರಾಜ್ಯ ಹಾಗೂ ಹೊರರಾಜ್ಯದಿಂದ ಬಂದ ಸಾವಿರಾರು ಭಕ್ತರು ಶುಕ್ರವಾರ ದರ್ಶನ ಪಡೆದು ಹರಕೆ ತೀರಿಸಿದರು. ಇನ್ನೂ ಕೆಲವರು ಹರಕೆ ಕಟ್ಟಿಕೊಂಡರು.
ಬಿಸಿಲಿನ ಬೇಗೆಗೆ ದಣಿದು ಬಂದಿದ್ದ ಭಕ್ತರಿಗೆ ಶ್ರೀಪೂರ್ಣ ಪೌಂಢೇಷನ್, ಅಜಾತ ನಾಗಲಿಂಗೇಶ್ವರ ಲಾರಿ ಮಾಲೀಕರ ಸಂಘ, ಶೈನಿಂಗ್ ಸ್ಟಾರ್ ಅಭಿಮಾನಿಗಳ ಬಳಗ, ಅಪ್ಪು ಅಭಿಮಾನಿ ಬಳಗ, ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಲ್ಲಂಗಡಿ ಹಣ್ಣು, ತಂಪುಪಾನೀಯ, ಮೊಸರು ಅವಲಕ್ಕಿ, ಹಣ್ಣು ಹಂಪಲು ವಿತರಿಸಿದರು.
‘ಮದುವೆಯಾಗಿ 12 ವರ್ಷವಾದರೂ ಸಂತಾನ ಭಾಗ್ಯ ಸಿಕ್ಕಿಲ್ಲ. ಕಾಮಣ್ಣ ದೇವರಿಗೆ ಹರಕೆ ಹೊತ್ತರೆ ಮನದಾಸೆ ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಅದೇ ನಂಬಿಕೆಯಿಂದ ಇಲ್ಲಿಗೆ ಬಂದಿದ್ದೇನೆ’ ಎಂದರು. ವಿಜಯಪುರದಿಂದ ಬಂದಿದ್ದ ಸಂತೋಷ ಕಲಾಲ ದಂಪತಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.