ಧಾರವಾಡ: ‘ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡು ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು, ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ನಿವೃತ್ತ ಪ್ರಾಧ್ಯಾಪಕ ಜಿನದತ್ತ ಹಡಗಲಿ ಹೇಳಿದರು.
ಚಿಲಿಪಿಲಿ ಮಕ್ಕಳ ಶಿಕ್ಷಣ ಹಾಗೂ ಸರ್ವಾಂಗೀಣ ಅಭಿವೃದ್ಧಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಈಚೆಗೆ ನಡೆದ ಚಿಲಿಪಿಲಿ ಮಕ್ಕಳ ನಾಟಕೋತ್ಸವದಲ್ಲಿ ಅವರು ಮಾತನಾಡಿದರು. ‘ಪಠ್ಯೇತರ ಚಟುವಟಿಕೆಗಳು ಮಕ್ಕಳ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುತ್ತವೆ. ನಾಟಕವು ನವರಸಗಳ ಮತ್ತು ಎಲ್ಲ ಲಲಿತ ಕಲೆ ಒಳಗೊಂಡ ಕಲೆ’ ಎಂದರು.
ಪರಿಸರ ಹೋರಾಟಗಾರ್ತಿ ಸರಸ್ವತಿ ಪೂಜಾರ ಮಾತನಾಡಿ, ‘ನಾಟಕಗಳಲ್ಲಿ ಅಭಿನಯಿಸುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅಳುವಂತೆ ನಟಿಸುವುದು, ಹಠಮಾಡುವುದು ಮೊದಲಾದ ಚಟುವಟಿಕೆಗಳ ಮೂಲಕ ಬಾಲ್ಯದಲ್ಲೇ ಮಗುವಿನೊಳಗೊಬ್ಬ ಕಲಾವಿದ ರೂಪಗೊಂಡಿರುತ್ತಾನೆ’ ಎಂದರು.
ಬಾಲಬಳಗದ ಮಕ್ಕಳು ‘ಒಗಟಿನರಾಣಿ', ದುರ್ಗಾ ಕಾಲೊನಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ‘ಮಳೆ ಮಾಯೆ', ರಂಗ ಸಾಮ್ರಾಟ ಅಭಿನಯ ಶಾಲೆಯ ಮಕ್ಕಳು ‘ವಚನ ರೂಪಕ', ಗುಬ್ಬಚ್ಚಿಗೂಡು ಶಾಲೆಯ ಮಕ್ಕಳು ‘ಕಾಡಿನ ಹಾಡು' ನೃತ್ಯ ಪ್ರದರ್ಶಿಸಿದರು.
ಚಿಲಿಪಿಲಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರಮಿಳಾ ಜಕ್ಕನ್ನವರ, ಡಾ. ಸಂಜೀವಕುಲಕರ್ಣಿ, ಲಕ್ಷ್ಮಣ ಫೀರಗಾರ, ಪ್ರತಿಭಾ ಕುಲಕರ್ಣಿ, ಶ್ರೀಶೈಲ ಕಮತರ, ಮಹಿಮಾ ಪಟೇಲ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ್, ಸುಜಾತಾ ಹಡಗಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.