ADVERTISEMENT

ಹುಬ್ಬಳ್ಳಿ | ಚಿನ್ನಾಭರಣವಿದ್ದ ಬ್ಯಾಗ್‌ ಮರಳಿಸಿದ ಆಟೊ ಚಾಲಕ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 16:07 IST
Last Updated 17 ಏಪ್ರಿಲ್ 2024, 16:07 IST
ಆಟೊದಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣವಿದ್ದ ಬ್ಯಾಗ್‌ ಅನ್ನು ಆಟೊ ಚಾಲಕ ನಾಗರಾಜ ಅವರು, ಹುಬ್ಬಳ್ಳಿ ಗೋಕುಲ ರಸ್ತೆ ಪೊಲೀಸ್‌ ಠಾಣೆ ಎದುರು ವಾರಸ್ದಾರರಿಗೆ ಹಸ್ತಾಂತರಿಸಿದರು
ಆಟೊದಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣವಿದ್ದ ಬ್ಯಾಗ್‌ ಅನ್ನು ಆಟೊ ಚಾಲಕ ನಾಗರಾಜ ಅವರು, ಹುಬ್ಬಳ್ಳಿ ಗೋಕುಲ ರಸ್ತೆ ಪೊಲೀಸ್‌ ಠಾಣೆ ಎದುರು ವಾರಸ್ದಾರರಿಗೆ ಹಸ್ತಾಂತರಿಸಿದರು   

ಹುಬ್ಬಳ್ಳಿ: ಬಸ್‌ ಹತ್ತುವ ಧಾವಂತದಲ್ಲಿ ಆಟೊದಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಇದ್ದ ಬ್ಯಾಗ್‌ ಅನ್ನು ಆಟೊ ಚಾಲಕರು ಮತ್ತು ಗೋಕುಲ ರಸ್ತೆ ಠಾಣೆ ಪೊಲೀಸರು ಪ್ರಯಾಣಿಕರಿಗೆ ಮರಳಿ ಕೊಡಿಸಿದ್ದಾರೆ.

ಧಾರವಾಡದ ನಿಜಾಮುದ್ದೀನ್‌ ಕಾಲೊನಿ ಮಹಿಳೆ ಮಂಗಳವಾರ ಮಧ್ಯಾಹ್ನ ನಗರದ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಿಂದ ಹೊಸೂರಿನ ಬಸ್ ನಿಲ್ದಾಣಕ್ಕೆ ಆಟೊದಲ್ಲಿ ಪ್ರಯಾಣಿಸಿದ್ದರು. ಬಸ್‌ ಹತ್ತುವ ಆತುರದಲ್ಲಿ ಹಣ ಮತ್ತು ಚಿನ್ನಾಭರಣ ಇದ್ದ ಬ್ಯಾಗ್‌ ಅನ್ನು ಆಟೊದಲ್ಲಿ ಮರೆತಿದ್ದರು. ನಂತರ ಬ್ಯಾಗ್ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಗೋಕುಲ ರಸ್ತೆ ಪೋಲಿಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದರು.

ಇನ್‌ಸ್ಪೆಕ್ಟರ್‌ ಪ್ರವೀಣ ನೀಲಮ್ಮನವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ನಾಗರಾಜ ಮೇಗುಂಡಿ ಅವರ ಆಟೊದಲ್ಲಿ ಮಹಿಳೆ ಪ್ರಯಾಣಿಸಿರುವುದು ಗಮನಕ್ಕೆ ಬಂದಿತ್ತು. ಆಟೊ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಅವರಿಗೆ ಪೊಲೀಸರು ವಿಷಯ ತಿಳಿಸಿದ್ದರು. ಮಂಗಳವಾರ ಆಟೊ ಚಾಲಕ ನಾಗರಾಜ ಅವರು, ಠಾಣೆಗೆ ಬ್ಯಾಗ್‌ ತಂದು ಪೊಲೀಸರ ಸಮ್ಮುಖದಲ್ಲಿ ವಾರಸ್ದಾರರಿಗೆ ಹಸ್ತಾಂತರಿಸಿದ್ದಾರೆ.

ADVERTISEMENT

40 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ, ₹10 ಸಾವಿರ ನಗದು ಸೇರಿದಂತೆ ಕೆಲವು ದಾಖಲೆ ಪತ್ರಗಳು ಬ್ಯಾಗ್‌ನಲ್ಲಿ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.