ಧಾರವಾಡ: ಬಿಆರ್ಟಿಎಸ್ ಮಾರ್ಗದ ಅಲ್ಲಲ್ಲಿ ಬಾಕಿ ಇರುವ ಸಮಸ್ಯೆಗಳಿಗೆ ಹಿಂದಿನ ಸರ್ಕಾರಗಳು ಹಾಗೂ ವ್ಯವಸ್ಥಾಪಕ ನಿರ್ದೇಶಕರುಗಳೇ ಕಾರಣ ಎಂದು ಜಗದೀಶ ಶೆಟ್ಟರ್ ಹೇಳಿದರು.
ಅಧಿಕಾರಿ ವರ್ಗಗಳ ಅಲಕ್ಷ್ಯದಿಂದ ಯೋಜನೆ ಹಾಳಾಗಿದೆ ಎಂದು ಇತ್ತೀಚೆಗೆ ಸ್ವಪಕ್ಷದ ಶಾಸಕ ಅರವಿಂದ ಬೆಲ್ಲದ ಅವರು ಆರೋಪ ಮಾಡಿದ್ದರು. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಶೆಟ್ಟರ್, ‘2012ರಲ್ಲಿ ಭಾರೀ ನಿರೀಕ್ಷೆಯಲ್ಲಿ ಈ ಯೋಜನೆಯನ್ನು ತರಲಾಗಿತ್ತು. ಆದರೆ ನಂತರ ಬಂದ ಸರ್ಕಾರಗಳು ಹಾಗೂ ಬದಲಾದ ವ್ಯವಸ್ಥಾಪಕ ನಿರ್ದೇಶಕರುಗಳಿಂದಾಗಿ ಯೋಜನೆ ಹೀಗಾಗಿದೆ’ ಎಂದರು.
‘ಹೀಗಿದ್ದರೂ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಬಿಆರ್ಟಿಎಸ್ ಪಡೆದಿದೆ. ಮಾರ್ಗದಲ್ಲಿ ಎಲ್ಲೋ ಸಣ್ಣ ಪುಟ್ಟ ತೊಂದರೆಗಳಿದ್ದರೆ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಈ ಕುರಿತು ಹೆಚ್ಚಿನದೇನನ್ನೂ ಪ್ರತಿಕ್ರಿಯಿಸುವುದಿಲ್ಲ’ ಎಂದರು.
ರಾಜ್ಯಸಭೆ ಟಿಕೆಟ್ ಮತ್ತು ವಿಧಾನ ಪರಿಷತ್ ಚುಣಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಸಿದ ಶೆಟ್ಟರ್, ‘ರಾಜ್ಯಸಭಾ ಚುನಾವಣೆಗೆ ಪಕ್ಷದ ವರಿಷ್ಠರು ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸಿದ್ದಾರೆ. ಹೀಗಾಗಿ ಈಗ ಈ ಚರ್ಚೆ ಅಪ್ರಸ್ತುತ. ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಸುಮಾರು 30ಕ್ಕೂ ಹೆಚ್ಚು ಅಕಾಂಕ್ಷಿಗಳ ಅರ್ಜಿಗಳು ನನಗೆ ಬಂದಿವೆ. ಚುನಾವಣೆ ಅಧಿಸೂಚನೆ ಹೊರಬಿದ್ದ ನಂತರ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.