ಧಾರವಾಡ: ‘ಕೇಂದ್ರ ಸರ್ಕಾರದ ಬೆಂಬಲಬೆಲೆಯಡಿ ಎಫ್ಎಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿ ಕೇಂದ್ರ ಆರಂಭವಾಗಿದ್ದು, ರೈತರು ನೋಂದಣಿ ಮಾಡಿಕೊಳ್ಳಲು ಏಪ್ರಿಲ್ 18 ಕೊನೆಯ ದಿನವಾಗಿದೆ' ಎಂದು ಜಿಲ್ಲಾ ಟಾಸ್ಟ್ಪೋರ್ಸ್ ಸಮಿತಿಯ ಅಧ್ಯಕ್ಷ ಭುವನೇಶ ಪಾಟೀಲ ತಿಳಿಸಿದ್ದಾರೆ.
‘ಒಟ್ಟು 25 ಖರೀದಿ ಕೇಂದ್ರಗಳಲ್ಲಿ ನೋಂದಾಯಿತ ರೈತರಿಂದ ಏಪ್ರಿಲ್ 28ರವರೆಗೆ ಕಡಲೆ ಖರೀದಿಸಲಾಗುತ್ತದೆ. ಪ್ರತಿ ಕ್ವಿಂಟಲ್ ಕಡಲೆಗೆ ₹5,875 ದರ ನಿಗದಿಯಾಗಿದೆ. ಪ್ರತಿ ರೈತರಿಂದ ಎಕರೆಗೆ ಗರಿಷ್ಠ 4 ಕ್ವಿಂಟಲ್ನಂತೆ ಒಟ್ಟು 40 ಕ್ವಿಂಟಲ್ ಖರೀದಿಸಲು ಅವಕಾಶವಿದೆ. ತೇವಾಂಶ ಪ್ರಮಾಣ ಶೇ 12ಕ್ಕಿಂತ ಕಡಿಮೆ ಇರಬೇಕು’ ಎಂದಿದ್ದಾರೆ.
‘ಆಧಾರ್ ಮೂಲ ಹಾಗೂ ನಕಲು ಪ್ರತಿ, ಆಧಾರ್ ಜೋಡಣೆಯಾದ ಬ್ಯಾಂಕ್ ಪಾಸ್ಪುಸ್ತಕದ ಪ್ರತಿ ತರಬೇಕು. ಗುಣಮಟ್ಟ ಚೆನ್ನಾಗಿರುವ, ಉತ್ತಮ ಗಾತ್ರ, ಬಣ್ಣ ಮತ್ತು ಆಕಾರದ, ಮಣ್ಣಿನಿಂದ ಪ್ರತ್ಯೇಕಿಸಿ, ಸ್ವಚ್ಛಗೊಳಿಸಿ ಹಾಗೂ ಕ್ರಿಮಿಕೀಟಗಳಿಂದ ಮುಕ್ತವಾಗಿರುವ ಕಡಲೆಯನ್ನು ಖರೀದಿಸಲಾಗುತ್ತದೆ’ ಎಂದು ಹೇಳಿದ್ದಾರೆ.
‘ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಕಡಲೆಕಾಳು ಖರೀದಿಸಲಾಗುವುದು. ಮಾಹಿತಿಗೆ ಧಾರವಾಡ, ಹುಬ್ಬಳ್ಳಿ, ಕುಂದಗೋಳ ಮತ್ತು ಅಣ್ಣಿಗೇರಿ ತಹಶೀಲ್ದಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ, ಶಾಖಾ ವ್ಯವಸ್ಥಾಪಕರ ದೂ.ಸಂ: 0836-2004419 ಸಂಪರ್ಕಿಸಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.