ADVERTISEMENT

ಧಾರವಾಡ ಹಾಲು ಒಕ್ಕೂಟ: ₹ 14 ಕೋಟಿ ಹಾಲಿನ ಪ್ರೋತ್ಸಾಹಧನ ಬಾಕಿ

ಹಾಲು ಉತ್ಪಾದಕರಿಗೆ ಆರ್ಥಿಕ ಸಂಕಷ್ಟ; 4 ತಿಂಗಳಿಂದ ಬಾಕಿ ಉಳಿದ ಪ್ರೋತ್ಸಾಹಧನ

ಸಂಧ್ಯಾರಾಣಿ
Published 21 ಫೆಬ್ರುವರಿ 2025, 6:39 IST
Last Updated 21 ಫೆಬ್ರುವರಿ 2025, 6:39 IST
   

ಹುಬ್ಬಳ್ಳಿ: ಧಾರವಾಡ ಹಾಲು ಒಕ್ಕೂಟದಿಂದ ಹಾಲಿನ ಪ್ರೋತ್ಸಾಹಧನ ಪಡೆದು ಕೊಂಚ ನೆಮ್ಮದಿಯಿಂದ ಇರಬೇಕಾದ ರೈತರಿಗೆ ಐದಾರು ತಿಂಗಳಿನಿಂದ ಅದು ಸಿಕ್ಕಿಲ್ಲ.

ಗದಗ, ಉತ್ತರಕನ್ನಡ ಮತ್ತು ಧಾರವಾಡ ಜಿಲ್ಲೆ ಒಳಗೊಂಡ ಹಾಲು ಒಕ್ಕೂಟಕ್ಕೆ 3 ಜಿಲ್ಲೆಗಳ 31,272 ರೈತರು ಹಾಲು ನೀಡುತ್ತಾರೆ. ಆದರೆ, ಪ್ರೋತ್ಸಾಹಧನ ಬಿಡುಗಡೆ ಆಗದ ಕಾರಣ ರೈತರು ಸಂಕಷ್ಟ ಎದುರಿಸುವಂತಾಗಿದೆ.

2023ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹಾಲಿನ ಪ್ರೋತ್ಸಾಹಧನವನ್ನು ₹ 5 ರಿಂದ ₹ 7 ರವರೆಗೆ ಹೆಚ್ಚಿಸುವುದಾಗಿ ಘೋಷಿಸಿತ್ತು. ಸಾಮಾನ್ಯ ವರ್ಗಕ್ಕೆ ಸೇರಿದ ರೈತರಿಗೆ 2024ರ ಜೂನ್‌ನಿಂದ, ಪರಿಶಿಷ್ಟ ಪಂಗಡದ ರೈತರಿಗೆ ಕಳೆದ ಡಿಸೆಂಬರ್‌ನಿಂದ, ಪರಿಶಿಷ್ಟ ವರ್ಗಕ್ಕೆ ಸೇರಿದ ರೈತರಿಗೆ ಕಳೆದ ಅಕ್ಟೋಬರ್‌ನಿಂದ ಪ್ರೋತ್ಸಾಹಧನ ಲೀಟರ್‌ಗೆ ₹ 5ರಂತೆ ಬಾಕಿ ಬರಬೇಕಿದೆ.

ADVERTISEMENT

ಧಾರವಾಡ ಹಾಲು ಒಕ್ಕೂಟದ ಸಾಮಾನ್ಯ ವರ್ಗದ ರೈತರಿಗೆ ₹ 13.67 ಕೋಟಿ, ಪರಿಶಿಷ್ಟ ಜಾತಿಯ ಹಾಲು ಉತ್ಪಾದಕರಿಗೆ ₹ 18 ಲಕ್ಷ ಮತ್ತು ಪರಿಶಿಷ್ಟ ಪಂಗಡದ ₹ 22 ಲಕ್ಷ ಬಾಕಿ ಬರಬೇಕಿರುವ ಪ್ರೋತ್ಸಾಹಧನದ ಮೊತ್ತ.

‘ಧಾರವಾಡ ಹಾಲು ಒಕ್ಕೂಟದಿಂದ ಒಟ್ಟು 3 ಜಿಲ್ಲೆಯ ರೈತರಿಗೆ ₹ 14ಕೋಟಿ ಹಾಲಿನ ಬಾಕಿ ಪ್ರೋತ್ಸಾಹಧನ ಬರಬೇಕಿದೆ. ಹಾಲು ಉತ್ಪಾದಕರ ಸಂಖ್ಯೆಯಲ್ಲಿ ಏರುಪೇರು ಇರುತ್ತದೆ. ರೈತರಿಗೆ ಕೊಡುವ ಬಾಕಿ ಉಳಿಸಿಕೊಳ್ಳುವ ಉದ್ದೇಶ ಇಲ್ಲ. ಒಂದು ತಿಂಗಳ ಅಂತ್ಯಕ್ಕೆ ಉತ್ಪಾದಕರ ಸಂಖ್ಯೆಗೆ ಅನುಗುಣವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಅದರಂತೆ ಬಿಲ್‌ ಬಿಡುಗಡೆ ಆದ ತಕ್ಷಣ ರೈತರ ಖಾತೆಗಳಿಗೆ ಪ್ರೋತ್ಸಾಹ ಧನದ ಹಣ ನೇರವಾಗಿ ವರ್ಗಾವಣೆ ಆಗುತ್ತದೆ. ಇದರಲ್ಲಿ ವಿಳಂಬವಾಗಿದೆ’ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗುದ್‌ ತಿಳಿಸಿದರು.

‘ರೈತರಿಗೆ ಮೇವಿನ ಬೀಜ ಪೂರೈಕೆ, ಜಾನುವಾರುಗಳಿಗೆ ಹಿಂಡಿ, ಕ್ಷೀರಭಾಗ್ಯಕ್ಕೆ ಹಾಲಿನ ಪುಡಿ ಪೂರೈಸಲಾಗುತ್ತಿದೆ. ಒಕ್ಕೂಟದ ವತಿಯಿಂದ ರೈತರಿಗೆ ಅಗತ್ಯ ಸೌಲಭ್ಯ ನಿಯಮಿತವಾಗಿ ಪೂರೈಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.