ADVERTISEMENT

ಹುಬ್ಬಳ್ಳಿ: ತ್ಯಾಜ್ಯದ ನೀರಿನ ದುರ್ನಾತ; ಜನರಿಗೆ ಸಂಕಷ್ಟ

ಮ್ಯಾನ್‌ಹೋಲ್‌ ತುಂಬಿಕೊಂಡು ರಸ್ತೆ ಮೇಲೆಯೇ ಹರಿಯುತ್ತಿದೆ ಕಲ್ಮಶ ನೀರು

ಶಿವರಾಯ ಪೂಜಾರಿ
Published 7 ಡಿಸೆಂಬರ್ 2024, 4:13 IST
Last Updated 7 ಡಿಸೆಂಬರ್ 2024, 4:13 IST
ಹುಬ್ಬಳ್ಳಿ ಗೋಕುಲ ರಸ್ತೆಯ ಜೆ.ಕೆ. ಕಾಲೊನಿಯಲ್ಲಿ ಮ್ಯಾನ್‌ಹೋಲ್ ತುಂಬಿಕೊಂಡು ತ್ಯಾಜ್ಯದ ನೀರು ರಸ್ತೆ ಮೇಲೆ ಹರಿಯಿತುಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ ಗೋಕುಲ ರಸ್ತೆಯ ಜೆ.ಕೆ. ಕಾಲೊನಿಯಲ್ಲಿ ಮ್ಯಾನ್‌ಹೋಲ್ ತುಂಬಿಕೊಂಡು ತ್ಯಾಜ್ಯದ ನೀರು ರಸ್ತೆ ಮೇಲೆ ಹರಿಯಿತುಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ 48ನೇ ವಾರ್ಡಿನ ಜೆ.ಕೆ. ಕಾಲೊನಿಯಲ್ಲಿ ಅಸಮರ್ಪಕ ನಿರ್ವಹಣೆಯಿಂದ ಮ್ಯಾನ್‌ಹೋಲ್‌ ಬ್ಲಾಕ್ ಆಗಿ, ತ್ಯಾಜ್ಯದ ನೀರು ಮನೆಗಳ ಸುತ್ತಮುತ್ತ ಹಾಗೂ ರಸ್ತೆಗಳಲ್ಲಿ ತುಂಬಿ ಹರಿಯುತ್ತಿದ್ದು, ಇದರಿಂದ ನಿವಾಸಿಗಳು ಬೇಸತ್ತಿದ್ದಾರೆ.

ಮ್ಯಾನ್‌ಹೋಲ್ ಬ್ಲಾಕ್ ಆಗಿದ್ದರಿಂದ ಖಾಸಗಿ ಆಸ್ಪತ್ರೆಯೊಂದರ ತ್ಯಾಜ್ಯದ ನೀರು ಚರಂಡಿಯಲ್ಲಿ ಹರಿಯದೆ ರಸ್ತೆ, ಹಾಗೂ ಪಕ್ಕದ ಖಾಲಿ ನಿವೇಶನಗಳಲ್ಲಿ ಹರಿಯುತ್ತಿದೆ. ಪಾರ್ಕ್‌ ನಿರ್ಮಾಣಕ್ಕೆಂದು ಸಮೀಪದಲ್ಲಿ ಬಿಟ್ಟಿರುವ ಖಾಲಿ ಜಾಗದಲ್ಲಿ ತ್ಯಾಜ್ಯದ ನೀರು ತುಂಬಿಕೊಂಡಿದ್ದು, ಕೆರೆಯಂತಾಗಿದೆ.

‘ಕಳೆದ ಮೂರು ತಿಂಗಳಿನಿಂದ ಈ ಸಮಸ್ಯೆ ಎದುರಾಗಿದ್ದು, ದುರ್ನಾತದಿಂದ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ತ್ಯಾಜ್ಯದ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ನಿವಾಸಿಗಳು ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಮಕ್ಕಳ ಸ್ಥಿತಿ ಹೇಳತೀರದಾಗಿದೆ’ ಎಂದು ಜೆ.ಕೆ. ಕಾಲೊನಿಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಸಿ.ಹಲಗತ್ತಿ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಮನೆಯೊಳಗಿದ್ದರೂ ತ್ಯಾಜ್ಯದ ದುರ್ನಾತ ಸಹಿಸಲು ಸಾಧ್ಯವಾಗದೆ ಮಾಸ್ಕ್ ಹಾಕಿಕೊಂಡೇ ಕುಳಿತುಕೊಳ್ಳುವಂತಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಆಸ್ಪತ್ರೆ ಹಾಗೂ ಪಾಲಿಕೆಗೆ ಕಳೆದ ಮೂರು ತಿಂಗಳಿನಿಂದ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ದುರ್ನಾತದಿಂದ ಪರಿಚಯಸ್ಥರು ಹಾಗೂ ಸಂಬಂಧಿಕರು ಮನೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಸಾಂಕ್ರಾಮಿಕ ಕಾಯಿಲೆಗೆ ಒಳಗಾಗಿ ಆರೋಗ್ಯದಲ್ಲಿ ಆಗಾಗ ಏರುಪೇರು ಉಂಟಾಗುತ್ತಿದೆ. ಜೀವ ಕಾಪಾಡಿಕೊಳ್ಳಲು ಇಲ್ಲಿನ ಮನೆ ಮಾರಾಟ ಮಾಡಿ ಬೇರೆಡೆ ಹೋಗುವುದೊಂದು ದಾರಿ ಉಳಿದಿದೆ’ ಎಂದು ಅಳಲು ತೋಡಿಕೊಂಡರು ಆರ್‌.ಸಿ. ಹಲಗತ್ತಿ.

‘ಆಸ್ಪತ್ರೆಯ ತ್ಯಾಜ್ಯ ನೀರು ಪಕ್ಕದಲ್ಲಿರುವ ನಮ್ಮ ಖಾಲಿ ನಿವೇಶನದಲ್ಲಿ ತುಂಬಿಕೊಂಡಿದ್ದು, ಒಳಗೆ ಕಾಲಿಡದಂತಾಗಿದೆ. ಈ ಬಗ್ಗೆ ಆಸ್ಪತ್ರೆಯವರಿಗೆ ತಿಳಿಸಿದರೆ, ಆದಷ್ಟು ಬೇಗ ಈ ಸಮಸ್ಯೆ ಪರಿಹರಿಸಲಾಗುತ್ತದೆ ಎಂಬ ಹಾರಿಕೆಯ ಉತ್ತರ ಮಾತ್ರ ನೀಡುತ್ತಿದ್ದು, ನಿವೇಶನಕ್ಕೆ ತ್ಯಾಜ್ಯದ ನೀರು ನುಗ್ಗುವುದು ಮಾತ್ರ ಇನ್ನೂ ನಿಂತಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಅಬ್ದುಲ್ ಗಣಿಸಾಬ್.

‘ಆಸ್ಪತ್ರೆಯ ತ್ಯಾಜ್ಯದ ನೀರು ಚರಂಡಿಗೆ ಸರಾಗವಾಗಿ ಹರಿದುಹೋಗುವಂತೆ ಮ್ಯಾನ್‌ಹೋಲ್‌ ದುರಸ್ತಿಗ ಸೂಚಿಸಲಾಗಿದೆ. ಎರಡ್ಮೂರು ದಿನಗಳಲ್ಲಿ ಆಸ್ಪತ್ರೆ ಹಾಗೂ ಪಾಲಿಕೆ ಸಹಯೋಗದಲ್ಲಿ ದುರಸ್ತಿ ಕಾಮಗಾರಿ ಆರಂಭಿಸಲಾಗುವುದು’ ಎಂದು 48ನೇ ವಾರ್ಡ್ ಕಾರ್ಪೋರೇಟರ್ ಕಿಶನ್ ಬೆಳಗಾವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹುಬ್ಬಳ್ಳಿ ಗೋಕುಲ ರಸ್ತೆಯ ಜೆ.ಕೆ. ಕಾಲೊನಿಯಲ್ಲಿ ಖಾಸಗಿ ಆಸ್ಪತ್ರೆಯ ತ್ಯಾಜ್ಯದ ನೀರು ಖಾಲಿ ನಿವೇಶನದಲ್ಲಿ ನಿಂತುಕೊಂಡು ಕೆರೆಯಂತಾಗಿದೆಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಜೆ.ಕೆ. ಕಾಲೊನಿ ನಿವಾಸಿಗಳಿಗೆ ನಿತ್ಯ ನರಕಯಾತನೆ ಮನೆಯ ಸುತ್ತಲೂ ಹರಿಯುತ್ತಿದೆ ತ್ಯಾಜ್ಯದ ನೀರು ದುರ್ನಾತ ಸಹಿಸದೆ ಮನೆಯಿಂದ ಹೊರಬರಲು ನಿವಾಸಿಗಳ ಹಿಂದೇಟು

ಆಸ್ಪತ್ರೆಗೆ ನೋಟಿಸ್!

ಆಸ್ಪತ್ರೆಯ ತ್ಯಾಜ್ಯದ ನೀರಿನಿಂದ ಜೆ.ಕೆ. ಕಾಲೊನಿಯಲ್ಲಿ ಅವ್ಯವಸ್ಥೆಯ ಸ್ಥಿತಿ ಉಂಟಾಗಿದ್ದು ಹೀಗಾಗಿ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಂದಿನ ಒಂದು ವಾರದೊಳಗೆ ಈ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು ಭರವಸೆ ನೀಡಿದ್ದಾರೆ.

‘ಸಮಸ್ಯೆ ಶೀಘ್ರ ಇತ್ಯರ್ಥ’

ಆಸ್ಪತ್ರೆ ನಿರ್ಮಾಣ ಆದಾಗಿನಿಂದಲೂ ಇಲ್ಲಿನ ತ್ಯಾಜ್ಯದ ನೀರು ಚರಂಡಿಗೆ ಸರಿಯಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ ಇತ್ತೀಚೆಗೆ ರಸ್ತೆ ಕಾಮಗಾರಿಯಿಂದ ಮ್ಯಾನ್‌ಹೋಲ್‌ನಲ್ಲಿ ಮಣ್ಣು ತುಂಬಿಕೊಂಡಿದ್ದರಿಂದ ತ್ಯಾಜ್ಯ ನೀರು ಹರಿಯಲು ಸಾಧ್ಯವಾಗದೆ ಹೊರಬರುತ್ತಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಮ್ಯಾನ್‌ಹೋಲ್ ದುರಸ್ತಿಗೆ ಈಗಾಗಲೇ ಕಾಂಟ್ರ್ಯಾಕ್ಟರ್‌ ನೀಡಲಾಗಿದೆ’ ಎಂದು ಆಸ್ಪತ್ರೆಯ ಬಸವರಾಜ ಜವಳಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.