ADVERTISEMENT

ಕಲಘಟಗಿ: ನರೇಗಾ ಕಾರ್ಮಿಕರೊಂದಿಗೆ ಸಂವಾದ, ಬುಟ್ಟಿಯಲ್ಲಿ ಮಣ್ಣು ಹೊತ್ತ ಸಿಇಒ!

ಖುದ್ದು ಕೆಲಸ ಮಾಡಿದ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 2:24 IST
Last Updated 10 ಮಾರ್ಚ್ 2022, 2:24 IST
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಸುರೇಶ ಇಟ್ನಾಳ್‌ ಬುಟ್ಟಿಯಲ್ಲಿ ಮಣ್ಣು ಹೊತ್ತು ಸಾಗಿದರು
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಸುರೇಶ ಇಟ್ನಾಳ್‌ ಬುಟ್ಟಿಯಲ್ಲಿ ಮಣ್ಣು ಹೊತ್ತು ಸಾಗಿದರು   

ಕಲಘಟಗಿ: ತಾಲ್ಲೂಕಿನ ಸಂಗಮೇಶ್ವರ ಗ್ರಾಮ ಪಂಚಾಯಿತಿಯ ದೊಡ್ಡ ಕೆರೆಯಲ್ಲಿ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಸುರೇಶ ಇಟ್ನಾಳ್‌, ಕೆಲ ಹೊತ್ತು ಗುದ್ದಲಿಯಿಂದ ಮಣ್ಣು ಅಗೆದು, ಬುಟ್ಟಿಯಲ್ಲಿ ಮಣ್ಣು ಹೊತ್ತು ಕಾರ್ಮಿಕರಿಗೆ ಸ್ಫೂರ್ತಿ ತುಂಬಿದರು.

ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಅವರು ನರೇಗಾ ಪ್ರಯೋಜನಾ ಪಡೆಯಿರಿ ಎಂದರು. ಕೇಕ್‌ ಕತ್ತರಿಸುವ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಆರೋಗ್ಯ ಶಿಬಿರ ಏರ್ಪಡಿಸಿ ಎಲ್ಲ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. 100 ದಿನ ಕೆಲಸ ಪೂರ್ಣಗೊಳಿಸಿದ ಕುಟುಂಬದ ಸದಸ್ಯರಿಗೆ ಸನ್ಮಾನಿಸಿದರು.

ನರೇಗಾ ಯೋಜನೆಯಡಿ ಪುರುಷ ಹಾಗೂ ಮಹಿಳೆಗೆ ಸಮಾನ ವೇತನವಿದ್ದು, ತಮ್ಮ ಗ್ರಾಮದಲ್ಲಿ 100 ದಿನಗಳ ಕಾಲ ಕೆಲಸ ಮಾಡಲು ಅವಕಾಶವಿದೆ. ಇದರ ಉಪಯೋಗ ಎಲ್ಲ ಕೂಲಿ ಕಾರ್ಮಿಕರು ಪಡೆದುಕೊಳ್ಳಬೇಕು. ಯಾರೂ ಸಹ ಗುಳೆ ಹೋಗಬಾರದು ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಇಒ ಶಿವಪುತ್ರಪ್ಪ ಮಠಪತಿ ಮಾತನಾಡಿ, ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವವರು ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದರೆ ಕೂಡಲೇ ತ್ವರಿತವಾಗಿ ಕೆಲಸ ನೀಡಲಾಗುವದು ಎಂದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರೇಖಾ ದೊಳ್ಳಿನವರ, ತಾಲ್ಲೂಕು ನರೇಗಾ ಸಹಾಯಕ ನಿರ್ದೇಶಕ ಚಂದ್ರು ಪೂಜಾರ, ಪಿಡಿಒ ಬಸವರಾಜ ಕೊಳೇರ ಹಾಗೂ ಆರೋಗ್ಯ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.