ಹುಬ್ಬಳ್ಳಿ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಇಂಚಗೇರಿ ಮಠದ ಮಾಧವಾನಂದ ಪ್ರಭು ಪುಣ್ಯತಿಥಿ ಸಪ್ತಾಹದ ಅಂಗವಾಗಿ, ಇಲ್ಲಿನ ವಿದ್ಯಾನಗರದ ಗಿರೀಶ ಆಶ್ರಮದಿಂದ ಇಂಚಗೇರಿ ಮಠದವರೆಗೆ ದಿಂಡಿ ಪಲ್ಲಕ್ಕಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಮೇ 19ರಂದು ಪಾದಯಾತ್ರೆ ಆರಂಭವಾಗಲಿದೆ. ಧಾರವಾಡ, ಪುಡಕಲಕಟ್ಟಿ, ಸವದತ್ತಿ, ಚುಂಚನೂರ, ಪಂಚಗಾವಿ, ಮುಧೋಳ, ಸಾರವಾಡ, ಕನ್ನೂರ ಮಾರ್ಗವಾಗಿ ಪಾದಯಾತ್ರೆಯು ಮೇ 28ರಂದು ಮಠ ತಲುಪಲಿದೆ. 31ರಿಂದ ಮರಳಿ ಇಂಚಟಗೇರಿ ಮಠದಿಂದ ಹೊನಗನಹಳ್ಳಿ, ಬಾಗಲಕೋಟೆ, ಕೆರೂರ, ಅರಿಸಿನಗೋಡಿ, ನರಗುಂದ, ನಾಗಶೆಟ್ಟಿಕೊಪ್ಪ ಮಾರ್ಗವಾಗಿ ಹುಬ್ಬಳ್ಳಿಯ ಗಿರೀಶ ಆಶ್ರಮ ತಲುಪಲಿದೆ.
ಪಾದಯಾತ್ರೆ ವೇಳೆ ಪುರಾಣ ಪ್ರವಚನ, ಭಜನೆ ಸೇರಿದಂತೆ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಸರ್ವಧರ್ಮ ಸಮನ್ವಯ, ಭಾವೈಕ್ಯತೆ, ವಿಶ್ವಶಾಂತಿಯ ಸಂದೇಶ ಸಾರುವುದೇ ಪಾದಯಾತ್ರೆ ಉದ್ದೇಶವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.