ಹುಬ್ಬಳ್ಳಿ: ’ಸೋಂಕಿತರಿಂದ ಅವರ ಅಕ್ಕಪಕ್ಕದ ಮನೆಯವರು ಕ್ವಾರಂಟೈನ್ಗೆ ಒಳಗಾದಾಗ ಯಾರೂ ಅವರನ್ನು ಕೀಳಾಗಿ ಕಾಣಬೇಡಿ. ಕಣ್ಣಿಗೆ ಕಾಣದ ಈ ಸೋಂಕಿನ ವಿರುದ್ಧ ನಾವೆಲ್ಲರೂ ಒಂದಾಗಿ ಹೋರಾಡಬೇಕಿದೆ. ಕಷ್ಟದ ಸಂದರ್ಭದಲ್ಲಿ ಕನಿಷ್ಠ ಮಾನವೀಯತೆಯನ್ನಾದರೂ ಉಳಿಸಿಕೊಳ್ಳಿ...’
ಸೋಂಕಿತ ವ್ಯಕ್ತಿಗೆ ಪ್ಲಾಸ್ಮಾ ನೀಡಿದ ತೊರವಿಹಕ್ಕಲದ ಖಬರಸ್ತಾನದ ಕಾವಲುಗಾರಿ (ಪಿ.363) ಹೇಳಿದ ಮಾತಿದು.
ಮುಲ್ಲಾ ಓಣಿಯ ವ್ಯಕ್ತಿಯ ಸಂಪರ್ಕದಿಂದ ಏಪ್ರಿಲ್ 18ರಂದು ಸೋಂಕಿತರಾಗಿದ್ದ ಕಾವಲುಗಾರ ಕೋವಿಡ್ 19ನಿಂದ ಚೇತರಿಸಿಕೊಂಡು ಮೇ 8ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಉತ್ತರ ಕರ್ನಾಟಕದಲ್ಲಿ ಸೋಂಕಿತರಿಗಾಗಿ ಪ್ಲಾಸ್ಮಾ ನೀಡಿದ ಮೊದಲ ವ್ಯಕ್ತಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾದರು.
‘ವೈದ್ಯ ಕೆ.ಐ. ಬಿಜಾಪುರಿ ಅವರ ಪ್ರೇರಣೆಯಿಂದ ಸೋಂಕಿತ ವ್ಯಕ್ತಿಗೆ ಪ್ಲಾಸ್ಮಾ ನೀಡಲು ಧೈರ್ಯ ಮಾಡಿದೆ. ಕಷ್ಟದ ಕಾಲದಲ್ಲಿ ಮನುಷ್ಯನಿಗೆ ಮನುಷ್ಯನೇ ಸಹಾಯ ಮಾಡದಿದ್ದರೆ ಇನ್ಯಾರು ಮಾಡುತ್ತಾರೆ’ ಎಂದು ಪ್ರಶ್ನಿಸಿದರು. 15 ದಿನಗಳ ಬಳಿಕ ಇನ್ನೊಬ್ಬ ವ್ಯಕ್ತಿಗೆ ಪ್ಲಾಸ್ಮಾ ನೀಡಲು ದೇಹವನ್ನು ಸಜ್ಜು ಮಾಡಿಕೊಳ್ಳುತ್ತಿದ್ದೇನೆ’ ಎಂದರು.
’ಕೋವಿಡ್ 19ನಿಂದ ಗುಣಮುಖರಾದ ಬಳಿಕ ಬಹಳಷ್ಟು ಜನ ನಮ್ಮ ಕುಟುಂಬದವರನ್ನು ಕೀಳಾಗಿ ಕಾಣುತ್ತಿದ್ದಾರೆ. ನಮ್ಮ ಅಕ್ಕಪಕ್ಕದ ಮನೆಯವರು ಕ್ವಾರಂಟೈನ್ ಆಗಿದ್ದಕ್ಕೆ ಅವರಲ್ಲಿ ಕೆಲವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಬಹಳಷ್ಟು ಜನ ನಮ್ಮ ಮನೆಗೆ ಬರುವುದನ್ನೇ ಬಿಟ್ಟಿದ್ದಾರೆ. ಆದ್ದರಿಂದ ಕಿಮ್ಸ್ ವೈದ್ಯ ಸಚಿನ್ ಹೊಸಕಟ್ಟಿ ನಮ್ಮ ಮನೆಗೆ ಬಂದು ಅಕ್ಕಪಕ್ಕದ ಜನರಲ್ಲಿನ ಆತಂಕವನ್ನು ದೂರ ಮಾಡುತ್ತಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.