ಧಾರವಾಡ: ‘ಬೇರೆ ಇಲಾಖೆ ಅಧಿಕಾರಿಗಳನ್ನು ಕಂದಾಯ ಇಲಾಖೆ ತಹಶೀಲ್ದಾರ್ ಹುದ್ದೆಗೆ ನೇಮಕ ಮಾಡಬಾರದು’ ಎಂದು ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮಳ್ಳಪ್ಪಗೌಡರ ಹೇಳಿದರು.
‘ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಯು ಒಂದು ತಾಲ್ಲೂಕಿನ ಮ್ಯಾಜಿಸ್ಟ್ರಿಯಲ್ ಅಧಿಕಾರ ಹೊಂದಿರುವ ಹುದ್ದೆಯಾಗಿದೆ. ಈ ಹುದ್ದೆಗಳಿಗೆ ಬೇರೆ ಇಲಾಖೆಯಿಂದ ತಹಶೀಲ್ದಾರ್ ಹುದ್ದೆಗೆ ನೇಮಕ ಮಾಡುವುದರಿಂದ ನಮ್ಮ ಮೂಲ ಕಂದಾಯ ಇಲಾಖೆ ನೌಕರರು ಮುಂಬಡ್ತಿಯಿಂದ ವಂಚಿತರಾಗುತ್ತಾರೆ. ಹೀಗಾಗಿ ಬೇರೆ ಇಲಾಖೆ ಅಧಿಕಾರಿಗಳನ್ನು ಈ ಹುದ್ದೆಗೆ ನೇಮಿಸಬಾರದು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಕಂದಾಯ ಇಲಾಖೆ ನೇರ ನೇಮಕಾತಿಯಲ್ಲಿ ಕರ್ನಾಟಕ ಆಡಳಿತ ಸೇವೆ ಉತ್ತೀರ್ಣಗೊಂಡವರು ಸುಮಾರ ಎರಡು ವರ್ಷಗಳಲ್ಲಿ ಎಲ್ಲ ಹಂತಗಳ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ತರಬೇತಿ, ರಾಜಸ್ವ ನಿರೀಕ್ಷಕ ಹುದ್ದೆಯ ತರಬೇತಿ, ವಿಷಯ ನಿರ್ವಾಹಕರ ತರಬೇತಿ, ಉಪ ತಹಶೀಲ್ದಾರ್ ಹುದ್ದೆಗೆ ತರಬೇತಿ ಹಾಗೂ ಮೈಸೂರಿನ ಆಡಳಿತ ತರಬೇತಿ ಕೆಂದ್ರದಲ್ಲಿ ತರಬೇತಿ ಪಡೆದು ನಂತರ ತಹಶೀಲ್ದಾರ್ ಹುದ್ದೆಗೆ ಬರುತ್ತಾರೆ. ಉಳಿದ ಶೇ 50 ಹುದ್ದೆಗಳು ಮೂಲ ಕಂದಾಯ ನೌಕರರಾದ ಗ್ರಾಮ ಲೆಕ್ಕಾಧಿಕಾರಿ ಹುದ್ದೆ, ದ್ವಿತೀಯ ದರ್ಜೆ ಸಹಾಯಕ ಹುದ್ದೆ ಹಾಗೂ ಶೀರಸ್ತೆದಾರರಾಗಿ ಕಳೆದ 30ರಿಂದ 35 ವರ್ಷಗಳ ಕಾಲ ಕೆಲಸ ಮಾಡಿ ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ಆಗಿ ಮುಂಬಡ್ತಿ ಹೊಂದುತ್ತಾರೆ. ಕಂದಾಯ ಇಲಾಖೆ ಮೂಲ ಆಡಳಿತ ಇಲಾಖೆಯಾಗಿದ್ದು, ಬೇರೆ ಇಲಾಖೆ ಅಧಿಕಾರಿಗಳನ್ನು ತಹಶೀಲ್ದಾರ್ ಹುದ್ದೆ ನೀಡಬಾರದು’ ಎಂದರು.
‘ಅನ್ಯ ಇಲಾಖೆಯಿಂದ ಬರುವವರು ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಗೆ ಮಾತ್ರ ಬರುತ್ತಿದ್ದಾರೆ. ಅವರನ್ನು ಈ ಹುದ್ದೆಗೆ ನೇಮಿಸಬಾರದು’ ಎಂದು ಆಗ್ರಹಿಸಿದರು.
ಸಂಘಟನಾ ಕಾರ್ಯದರ್ಶಿ ಕೆ. ಶ್ರೀಧರ, ಜಂಟಿ ಕಾರ್ಯದರ್ಶಿ ಗಣೇಶ ಚಳಗೇರಿ, ಕಾರ್ಯಕಾರಿ ಮಂಡಳಿ ಸದಸ್ಯ ಕುಮಾರ ಪಡೆಪ್ಪನವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.