ಹುಬ್ಬಳ್ಳಿ: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ಸಹಯೋಗದಲ್ಲಿ ಇಲ್ಲಿನ ಗೋಕುಲ ಗಾರ್ಡನ್ನಲ್ಲಿ ನಡೆಯಲಿರುವ 11ನೇ ಆವೃತ್ತಿಯ ‘ಎಡ್ಯುವರ್ಸ್: ಜ್ಞಾನ ದೇಗುಲ’ ಶೈಕ್ಷಣಿಕ ಮಾರ್ಗದರ್ಶಿ ಮೇಳ ಶನಿವಾರದಿಂದ (ಜೂನ್ 1) ಆರಂಭವಾಗಲಿದೆ.
ಬೆಳಿಗ್ಗೆ 9.30ಕ್ಕೆ ಮೇಳ ಉದ್ಘಾಟಿಸುವ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಯಲ್ಲಿ 17ನೇ ರ್ಯಾಂಕ್ ಗಳಿಸಿರುವ, ಹುಬ್ಬಳ್ಳಿಯ ರಾಹುಲ್ ಸಂಕನೂರ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾನುವಾರ (ಜೂನ್ 2) ಮಾತನಾಡಲಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಎಸ್.ರವಿ ಅವರು ಸಿಇಟಿ ಮತ್ತು ನೀಟ್ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲಿದ್ದಾರೆ. ವಿಶೇಷ ಅಧಿಕಾರಿ ಶಾಂತಾರಾಂ, ಕಾಮೆಡ್–ಕೆ ಪ್ರವೇಶ ಕುರಿತು ಮಾಹಿತಿ ಒದಗಿಸಲಿದ್ದಾರೆ. ಶಿಕ್ಷಣ ಸಾಲ ಯೋಜನೆಯ ಜತೆಗೆ ವಿಶೇಷ ಕೋರ್ಸ್ಗಳ ಮಾಹಿತಿಯೂ ಇಲ್ಲಿ ಲಭ್ಯವಾಗಲಿದೆ.
ದೇಶದ ಹೆಸರಾಂತ ವಿಶ್ವವಿದ್ಯಾಲಯಗಳು, ವೃತ್ತಿಪರ ಕಾಲೇಜುಗಳ ಬಗ್ಗೆ ಮಾಹಿತಿ ನೀಡುವ ಮಳಿಗೆಗಳು ಮೇಳದಲ್ಲಿ ಇರಲಿವೆ. ಕಾಲೇಜುಗಳಲ್ಲಿ ಲಭ್ಯ ಇರುವ ಕೋರ್ಸ್ಗಳ ಮಾಹಿತಿ, ಶುಲ್ಕ ವಿವರ, ಕೋರ್ಸ್ ಅಧ್ಯಯನದಿಂದ ಭವಿಷ್ಯದಲ್ಲಿ ಸಿಗುವ ಉದ್ಯೋಗ ಅವಕಾಶಗಳ ಕುರಿತು ಮಾಹಿತಿ ಲಭ್ಯ ಇರಲಿದೆ.
ಸಿಇಟಿ ಮತ್ತು ಕಾಮೆಡ್–ಕೆ ಅಧಿಕಾರಿಗಳ ತಂಡದಿಂದ ಉಚಿತ ಕೌನ್ಸೆಲಿಂಗ್ ಸಹ ಇರಲಿದೆ. ಶಿಕ್ಷಣ ತಜ್ಞರು ಶೈಕ್ಷಣಿಕ ರಂಗದಲ್ಲಿನ ಬೆಳವಣಿಗೆಗಳಿಗೆ ಹೊಂದಿಕೊಳ್ಳುವ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಸಹ ನಡೆಸಲಿದ್ದಾರೆ.
ಕೆಎಲ್ಇ, ಪ್ರೆಸಿಡೆನ್ಸಿ, ರೇವಾ, ಸಿಎಂಆರ್ ಗಾರ್ಡನ್ ಸಿಟಿ, ಗೀತಮ್, ಎಂ.ಎಸ್.ರಾಮಯ್ಯ, ದಯಾನಂದ ಸಾಗರ್, ಅಲಯನ್ಸ್ ವಿಶ್ವವಿದ್ಯಾಲಯಗಳ ಮಳಿಗೆಗಳು ಮೇಳದಲ್ಲಿ ಇರಲಿವೆ. ಆಚಾರ್ಯ, ಕೇಂಬ್ರಿಜ್, ಈಸ್ಟ್ ಪಾಯಿಂಟ್, ಎಚ್ಕೆಬಿಕೆ, ಸಂಭ್ರಮ್, ಯುನಿವರ್ಸಲ್ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಸಹ ಮಾಹಿತಿ ನೀಡಲಿದ್ದಾರೆ.
ಮಾಹಿತಿಗಾಗಿ ಗಿರೀಶ್ ಕಣವಿ (98809 08652), ರಾಜಶೇಖರ್ ಶಿರಹಟ್ಟಿ (96069 12218) ಅವರನ್ನು ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.