ಕಲಘಟಗಿ: ತಾಲ್ಲೂಕಿನ ತಂಬೂರ ಶಾಖಾ ವ್ಯಾಪ್ತಿಯ ಸಿದ್ದನಬಾವಿ ಅರಣ್ಯ ಪ್ರದೇಶದಲ್ಲಿ ಭಾನುವಾರ ಕಾರ್ಯಾಚರಣೆ ನಡೆಸುವ ವೇಳೆ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಕಾಡಾನೆಯೊಂದು ದಿಢೀರನೆ ದಾಳಿ ಮಾಡಿದ್ದು ಗಾಯಗಳಾಗಿವೆ. ಕೆಲವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲವಾರು ದಿನಗಳಿಂದ ಎಂಟು ಆನೆಗಳು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ತಂಬೂರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿದ್ದವು. ಅರಣ್ಯ ಅಧಿಕಾರಿಗಳು ಎಂದಿನಂತೆ ತಂಬೂರ ಗ್ರಾಮದ ಗೌಳಿ ದಡ್ಡಿಯಿಂದ ಆನೆಗಳನ್ನು ಕಾಡಿಗೆ ಓಡಿಸಲು ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ಮದ್ದಾನೆ ಅಧಿಕಾರಿಗಳ ಮೇಲೆ ದಾಳಿ ಮಾಡಿದೆ.
ತಾಲ್ಲೂಕು ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ನೇತೃತ್ವದಲ್ಲಿ ಎಂ.ವೈ. ಛಲವಾದಿ, ಉಪವಲಯ ಅರಣ್ಯಾಧಿಕಾರಿ ಸುರೇಶ ಹರೋಲಿ, ಉಮೇಶ ಕಡಿ, ಮಹಾತೇಶ ಮಾಗಿ, ಸಿದ್ದಪ್ಪ ದೇವಣ್ಣವರ, ಮೌಶಿನ ಗುಳಗುಂದಿ, ಆನಂದ ಮನಗಣ್ಣವರ, ಮೌನೇಶ ಲಿಂಗನಶೆಟ್ಟಿ, ಕೃಷ್ಣ ಪಮ್ಮಾರ, ಪರಶುರಾಮ ಲಕ್ಕಣ್ಣವರ ಹಾಗೂ ಅರಣ್ಯ ವೀಕ್ಷಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಾಚರಣೆ ವೇಳೆ ಕಾಡಾನೆ ದಾಳಿ ಮಾಡಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಕ್ಕೆ ತೊಂದರೆಯಾಗಿಲ್ಲ ಎಂದು ಶ್ರೀಕಾಂತ ಪಾಟೀಲ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.