ADVERTISEMENT

ಗಿರಣಿ ಚಾಳ: ಅತಿಕ್ರಮಣ ತೆರವು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 16:36 IST
Last Updated 4 ಏಪ್ರಿಲ್ 2021, 16:36 IST
ಕಾರವಾರ ರಸ್ತೆಯಿಂದ ‌ಅಂಚಟಗೇರಿ ತನಕದ ಗಿರಣಿ ಚಾಳದ ಬಳಿ ಅತಿಕ್ರಮಣ ತೆರವು ಕಾರ್ಯಾಚರಣೆ ಭಾನುವಾರ ನಡೆಯಿತು
ಕಾರವಾರ ರಸ್ತೆಯಿಂದ ‌ಅಂಚಟಗೇರಿ ತನಕದ ಗಿರಣಿ ಚಾಳದ ಬಳಿ ಅತಿಕ್ರಮಣ ತೆರವು ಕಾರ್ಯಾಚರಣೆ ಭಾನುವಾರ ನಡೆಯಿತು   

ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿ 63 ವಿಸ್ತರಣೆ ಮಾಡುವ ಸಲುವಾಗಿ ಭಾನುವಾರ ಕಾರವಾರ ರಸ್ತೆಯಿಂದ ಅಂಚಟಗೇರಿ ತನಕದ ಮಾರ್ಗದಲ್ಲಿ ಗಿರಣಿಚಾಳ ಬಳಿ ಮಳಿಗೆಗಳು ಹಾಗೂ ಮನೆಗಳನ್ನು ತೆರವು ಮಾಡಲಾಯಿತು.

ಗಿರಣಿಚಾಳದಲ್ಲಿ ಭಾನುವಾರ ಬೆಳಿಗ್ಗೆ ಜೆಸಿಬಿ ಯಂತ್ರದೊಂದಿಗೆ ಬಂದ ಅಧಿಕಾರಿಗಳು ಪೊಲೀಸ್‌ ಬಿಗಿ ಬಂದೋ ಬಸ್ತ್‌ನಲ್ಲಿ ಗಿರಣಿಚಾಳದಲ್ಲಿ ಏಳು ಮನೆಗಳು ಮತ್ತು ನಾಲ್ಕು ಅಂಗಡಿಗಳನ್ನು ತೆರವು ಮಾಡಿದರು. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಹಲವಾರು ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದೇವೆ. ತೆರವು ಮಾಡುವ ಬಗ್ಗೆ ಒಂದು ದಿನ ಮೊದಲಷ್ಟೇ ಮಾಹಿತಿ ನೀಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇರುವ ಒಂದು ಮನೆಯನ್ನು ಬಿಟ್ಟು ಎಲ್ಲಿಗೆ ಹೋಗಿ ಬದುಕಬೇಕು? ಏನು ಮಾಡಬೇಕು? ಎನ್ನುವುದೇ ತಿಳಿಯದಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು. ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದೂ ಆಗ್ರಹಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರದ ಅಧಿಕಾರಿಗಳು ‘ಅತಿಕ್ರಮಣ ತೆರವು ಮಾಡಲಾಗುವುದು ಎಂದು ಹಿಂದೆಯೇ ಸೂಚನೆ ನೀಡಲಾಗಿತ್ತು. ಶನಿವಾರವೂ ಇದರ ಬಗ್ಗೆ ಮಾಹಿತಿ ನೀಡಿದ್ದೆವು. ಅತಿಕ್ರಮಣವಾದ ಉಳಿದ ಪ್ರದೇಶಗಳಲ್ಲಿಯೂ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಸೂಚನೆ ನೀಡಿರುವ ಮನೆ ಹಾಗೂ ಅಂಗಡಿಯವರು ಸಾಮಗ್ರಿಗಳನ್ನು ತೆಗೆದಿಟ್ಟುಕೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.