ಹುಬ್ಬಳ್ಳಿ: ಸೋಮವಾರ ಮತ್ತು ಗುರುವಾರ ರಾಜ್ಯದಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಹುಬ್ಬಳ್ಳಿಯಲ್ಲೂ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಪರೀಕ್ಷೆ ನಡೆಯಲಿರುವ ನಗರದ 39 ಕಾಲೇಜು ಹಾಗೂ ಪ್ರೌಢಶಾಲೆಗಳ ಕೇಂದ್ರಗಳಲ್ಲಿ ಸೋಂಕು ನಿರೋಧಕ ದ್ರಾವಣ ಸಿಂಪಡಿಸಲಾಯಿತು. ಒಂದು ಕೊಠಡಿಯಲ್ಲಿ ಗರಿಷ್ಠ 12 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯುವಂತೆ ಆಸನದ ವ್ಯವಸ್ಥೆ ಮಾಡಿ, ನೋಂದಣಿ ಸಂಖ್ಯೆ ಬರೆಯಲಾಗಿದೆ.ಪರೀಕ್ಷಾ ಕೇಂದ್ರದ ಎದುರು ಸ್ಯಾನಿಟೈಸರ್, ಮಾಸ್ಕ್ ಇಡಲು ವ್ಯವಸ್ಥೆ ಮಾಡಲಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿದ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ‘ನಗರದಲ್ಲಿ 8,770 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಅಂದಾಜು ಒಂದು ಸಾವಿರ ಶಿಕ್ಷಕರನ್ನು ನಿಯೋಜಿಸಿದ್ದು, ಅವರೆಲ್ಲರೂ ಕನಿಷ್ಠ ಒಂಡು ಡೋಸ್ ಕೋವಿಡ್ ಲಸಿಕೆ ಪಡೆದವರಾಗಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿಯೊಂದು ಕೇಂದ್ರದಲ್ಲೂ ಇದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸಲಿದ್ದಾರೆ’ ಎಂದರು.
ಸ್ವಚ್ಛತಾ ಕಾರ್ಯಕ್ರಮ: ಇಲ್ಲಿಯ ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದ ಯೂತ್ ರೆಡ್ ಕ್ರಾಸ್ ವಿಭಾಗದ ವಿದ್ಯಾರ್ಥಿಗಳು ಕುಸಗಲ್ನ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಶಾಲಾ ಕೊಠಡಿಗಳನ್ನು ಸೋಂಕು ನಿರೋಧಕ ದ್ರಾವಣ ಸಿಂಪಡಿಸಿ ಶುಚಿಗೊಳಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಸವರಾಜ ಅನಾಮಿ, ಮುಖ್ಯ ಶಿಕ್ಷಕ ಪವಾಡೆಪ್ಪ ಮ್ಯಾಗೇರಿ ಹಾಗೂ ವಿದ್ಯಾರ್ಥಿಗಳಾದ ಮಧುಮತಿ, ಕೃತಿಕಾ, ಪೃಥ್ವಿ, ಲಕ್ಷ್ಮಿ, ವಿದ್ಯಾ, ಪ್ರಿಯಾಂಕಾ, ಅಲ್ಫಾನ್ಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.