ADVERTISEMENT

ಧಾರವಾಡ| ಕಟ್ಟಿಗೆ ಅಡ್ಡೆಗಳಿಗೆ ಬೆಂಕಿ: ₹50 ಲಕ್ಷ ಮೌಲ್ಯದ ಕಟ್ಟಿಗೆ ಆಹುತಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 6:04 IST
Last Updated 9 ಮಾರ್ಚ್ 2023, 6:04 IST
ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ
ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ   

ಧಾರವಾಡ: ಇಲ್ಲಿನ ಮೀನು ಮಾರುಕಟ್ಟೆ ಸಮೀಪದಲ್ಲಿ ಇದ್ದ ಎರಡು ಕಟ್ಟಿಗೆ ಅಡ್ಡೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿಯಾಗಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ನಗರದ ಮಣಕಿಲ್ಲಾದಲ್ಲಿ ಇರುವ ತೋಟಪ್ಪ ಗುರುಸಿದ್ದಪ್ಪ ಸಣ್ಣನಾಗನ್ನವರ ಹಾಗೂ ಕೃಷ್ಣಾ ಹನುಮಂತಪ್ಪ ಬೆಳಗಳಿ ಅವರಿಗೆ ಸಂಬಂಧಿಸಿದ ಕಟ್ಟಿಗೆ ಅಡ್ಡೆಗಳು ಸುಟ್ಟು ಕರಕಲಾಗಿವೆ. ಆಕಸ್ಮಿಕವಾಗಿ ಅಡ್ಡಯೊಂದರಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ಅದರ ಪಕ್ಕದಲ್ಲಿ ಮತ್ತೊಂದು ಕಟ್ಟಿಗೆ ಅಡ್ಡೆ ಇದ್ದ ಪರಿಣಾಮ ಬೆಂಕಿ ಅದಕ್ಕೂ ಹೊತ್ತುಕೊಂಡಿದೆ.

ಪರಿಣಾಮ ಅಡ್ಡೆ ತುಂಬ ಇಡಲಾಗಿದ್ದ ಕಟ್ಟಿಗೆಗಳಿಗೆ ಬೆಂಕಿ ಕೆನ್ನಾಲಿಗೆ ದೊಡ್ಡಮಟ್ಟದಲ್ಲಿ ಚಾಚಿಕೊಂಡಿತ್ತು. ಅದನ್ನು ನೋಡಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ಮುಟ್ಟಿಸಿದರು. ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಅಷ್ಟರಲ್ಲಾಗಲೇ ತೋಟಪ್ಪನವರಿಗೆ ಸೇರಿದ ಅಡ್ಡೆಯಲ್ಲಿ ₹30 ಲಕ್ಷ ಹಾಗೂ ಕೃಷ್ಣಾ ಅವರ ಅಡ್ಡೆಯಲ್ಲಿ ₹25 ಲಕ್ಷ ಮೌಲ್ಯದ ಕಟ್ಟಿಗೆಗಳು ಸುಟ್ಟು ಕರಕಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.