ADVERTISEMENT

​ನವಲಗುಂದ: ಪ್ರವಾಹದಲ್ಲಿ ಸಿಲುಕಿದ್ದ ಐದು ಮಂದಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 8:39 IST
Last Updated 8 ಸೆಪ್ಟೆಂಬರ್ 2020, 8:39 IST
ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಲಾಯಿತು
ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಲಾಯಿತು   
""

ನವಲಗುಂದ:ಗುಡಿಸಾಗರ ಗ್ರಾಮದ ಬಳಿ ಬೆಣ್ಣೆಹಳ್ಳದ ದಡದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಐದು ಮಂದಿಯನ್ನುರಕ್ಷಿಸಲಾಗಿದೆ.

ಸೊಟಕನಾಳ ಗ್ರಾಮದ ಬಳಿ ಸೋಮವಾರ ರಾತ್ರಿ ಪೂರ್ತಿ ಪ್ರವಾಹದಲ್ಲಿ ಸಿಲುಕಿದ್ದು ಬೆಳಿಗ್ಗೆ ಸುದ್ದಿ ತಿಳಿಯುತ್ತಿದ್ದಂತೆಯೇ ತಾಲ್ಲೂಕಾಡಳಿತ ರಕ್ಷಣಾ ಕಾರ್ಯಾಚರಣೆ ನಡೆಸಿತು.

ನಿನ್ನೆಯಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಸಿಬ್ಬಂದಿಗೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಶ್ಲಾಘಿಸಿದರು.

ADVERTISEMENT

ಅಮರಗೋಳದವರಾದ ಕಲ್ಲಪ್ಪ ಹಡಪದ, ಈತನ ಹೆಂಡತಿ ಶೇಖವ್ವ ಹಡಪದ, ಮಗ ವಿಜಯ ಹಡಪದ, ಮಗಳು ಗಂಗವ್ವ ಹಡಪದ ಹಾಗೂ ಕಲ್ಲಪ್ಪನ ಸಹೋದರನ ಮಗ ರವಿ ಹಡಪದ ಬೆಣ್ಣೆ ಹಳ್ಳದ ಪ್ರವಾಹದ ಸಿಲುಕಿದ್ದರು.ಎಲ್ಲರೂ ಒಂದೇ ಕುಟುಂಬದವರಾಗಿದ್ದು ಸೋಮವಾರ ಹೆಸರು ಕಾಳು ಬಿಡಿಸಲು ಸೊಟಕನಾಳ ಗ್ರಾಮದ ಬಳಿ ಇರುವ ಹೊಲಕ್ಕೆ ಹೋಗಿದ್ದರು. ಆದರೆ ಸಂಜೆ ಆಗುತ್ತಿದ್ದಂತೆಯೇ ಹಳ್ಳದ ಪ್ರವಾಹ ಹೆಚ್ಚಾದ ಕಾರಣ ಸೋಮವಾರ ಈಡಿ ರಾತ್ರಿ ಹೊಲದಲ್ಲಿಯೇ ಉಪವಾಸ ಕಳೆದಿದ್ದಾರೆ. ಹಳ್ಳದ ಪ್ರವಾಹ ಕಡಿಮೆಯಾಗಬಹುದೆಂದು ಯಾರಿಗೂ ಸುದ್ದಿ ತಿಳಿಸಿರಲಿಲ್ಲ. ಆದರೆ ಮಂಗಳವಾರ ಬೆಳಗಿನ ಜಾವ ಪ್ರವಾಹ ಇಳಿಮುಖವಾಗದ ಕಾರಣ ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದ ಸುದ್ದಿಯನ್ನು ಗ್ರಾಮಸ್ಥರಿಗೆ ತಿಳಿಸಿದ ನಂತರವೇ ತಾಲ್ಲೂಕಾ ಆಡಳಿತಕ್ಕೆ ಸುದ್ದಿ ತಿಳಿದಿತ್ತು.

ಸೋಮವಾರ ಮಧ್ಯರಾತ್ರಿಯಷ್ಟೇ ಗುಡಿಸಾಗರದ ಬಳಿ ಮೂವರನ್ನು ರಕ್ಷಣೆ ಮಾಡುವಲ್ಲಿ ತಾಲ್ಲೂಕಾ ಆಡಳಿತ ಯಶಸ್ವಿಯಾಗಿ ಮನೆಗೆ ಮರಳಿದ್ದರು. ಹುಬ್ಬಳ್ಳಿಯಿಂದ ತರಿಸಿಕೊಂಡಿದ್ದ ಬೋಟ್‍ನ್ನು ಮರಳಿ ಕಳುಹಿಸಿದ್ದರು. ಆದರೆ ಮಂಗಳವಾರ ಮತ್ತೇ ಐವರು ಸಿಲುಕಿದ್ದಾರೆಂಬ ಸುದ್ದಿ ಬರುತ್ತಿದ್ದಂತೆಯೇ ಪೊಲೀಸರು, ಅಗ್ನಿ ಶಾಮಕ ದಳದವರು ಎಚ್ಚೆತ್ತುಕೊಂಡು ಸ್ಥಳಕ್ಕೆ ದೌಡಾಯಿಸಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಹುಬ್ಬಳ್ಳಿಯಿಂದ ಮತ್ತೇ ಬೋಟ್ ತರಿಸಿಕೊಳ್ಳಲಾಗುತ್ತಿದೆ. ರಾತ್ರಿಯೇ ಈ ವಿಷಯ ತಿಳಿದಿದ್ದರೆ ಬೋಟ್‍ನ್ನು ಮರಳಿ ಕಳುಹಿಸದೇ ರಾತ್ರಿಯೇ ಇವರನ್ನು ರಕ್ಷಣೆ ಮಾಡಬಹುದಾಗಿತ್ತು ಎಂದು ಪಿಎಸ್‌ಐ ಜಯಪಾಲ ಪಾಟೀಲ ತಿಳಿಸಿದ್ದಾರೆ.

ತಹಶೀಲ್ದಾರ್‌ನವೀನ ಹುಲ್ಲೂರ, ಸಿಪಿಏ ಚಂದ್ರಶೇಖರ ಮಠಪತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಪ್ರವಾಹದ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.