ಹುಬ್ಬಳ್ಳಿ: ಕೋವಿಡ್ ಎರಡನೆ ಅಲೆ ವೇಗವಾಗಿ ಹರಡುತ್ತಿರುವ ಕಾರಣ ರಾಜ್ಯದಾದ್ಯಂತ ಎಲ್ಲ ಶಾಲೆಗಳಿಗೆ ರಜೆ ಘೋಷಿಸಬೇಕು ಹಾಗೂ ಶಿಕ್ಷಕರ ವರ್ಗಾವಣೆಯನ್ನು ಶೀಘ್ರವಾಗಿ ಆರಂಭಿಸಬೇಕು ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದವರು ಒತ್ತಾಯಿಸಿದ್ದಾರೆ.
ಈ ಕುರಿತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಗುರುವಾರ ಅವರ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
‘ಶಾಲೆಗಳನ್ನು ಕೊರೊನಾ ಹಾಟ್ ಸ್ಪಾಟ್ ಮಾಡದೆ ಆದಷ್ಟು ಬೇಗನೆ 1ರಿಂದ 9ನೇ ತರಗತಿವರೆಗಿನ ಪರೀಕ್ಷೆಗಳನ್ನು ಮುಗಿಸಿ ಬೇಸಿಗೆ ರಜೆ ಘೋಷಣೆ ಮಾಡಬೇಕು. ಬೆಂಗಳೂರು ನಗರ ಜಿಲ್ಲೆಯಲ್ಲಿ ಬೋಧನೆ ಸ್ಥಗಿತಗೊಳಿಸಿರುವಂತೆ ರಾಜ್ಯದಾದ್ಯಂತ ಸ್ಥಗಿತ ಮಾಡಬೇಕು. ಈ ಮೂಲಕ ಮಕ್ಕಳು ಹಾಗೂ ಶಿಕ್ಷಕರ ಜೀವ ರಕ್ಷಣೆ ಮಾಡಬೇಕು’ ಎಂದು ಕೋರಿದರು.
ಮನವಿ ಸ್ವೀಕರಿಸಿದ ಹೊರಟ್ಟಿ ಅವರು ಸ್ಥಳದಲ್ಲಿಯೇ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ‘ಶಿಕ್ಷಕರ ಸಂಘಟನೆಯ ಬೇಡಿಕೆಗಳನ್ನು ತುರ್ತಾಗಿ ಈಡೇರಿಸಬೇಕು. ನಾಲ್ಕೈದು ದಿನಗಳಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು’ ಎಂದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಸಜ್ಜನ, ಕಾರ್ಯಾಧ್ಯಕ್ಷ ಶರಣಪ್ಪ ಗೌಡ ಆರ್.ಕೆ. ಗೌರವಾಧ್ಯಕ್ಷ ಎಲ್.ಐ. ಲಕ್ಕಮ್ಮನವರ, ಕೋಶಾಧ್ಯಕ್ಷ ಎಸ್.ಎಫ್ ಪಾಟೀಲ, ಉಪಾಧ್ಯಕ್ಷರಾದ ಗೋವಿಂದ ಜುಜಾರೆ ಸುರೇಶ ಅರಳಿ ಹಾಗೂ ಡಿ.ಟಿ.ಭಂಡಿವಡ್ಡರ ಜಿಲ್ಲಾ ಘಟಕದ ಅಧ್ಯಕ್ಷ ಅಕ್ಬರಲಿ ಸೊಲ್ಲಾಪೂರ, ಆನಂದ ದುಂದೂರ, ಎ.ಐ.ಮುಳಗುಂದ, ಡಾ.ರಾಮು ಮೂಲಗಿ, ಎಸ್.ಸಿ.ಹೊಳೆಯಣ್ಣವರ, ಕೆ.ಕೆ.ಚಿಪ್ಪಾಡಿ, ಬಿ.ಕೆ.ಹಾಲವರ, ಬಿ.ವಿ.ಅಂಗಡಿ, ವೈ.ಎಫ್. ಕೆಂಪಣ್ಣವರ, ಬಿ.ಎಚ್. ಕಲ್ಲಣ್ಣವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.