
ಸೈಬರ್ ವಂಚನೆ
ಹುಬ್ಬಳ್ಳಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ₹6.64 ಲಕ್ಷ ವಂಚಿಸಲಾಗಿದೆ.
ನಗರದ ಬೆಂಗೇರಿಯ ಮೆಹಬೂಬ್ ನರೇಗಲ್ ಅವರು ವಿದೇಶಿ ಉದ್ಯೋಗದ ಕುರಿತು ಫೇಸ್ಬುಕ್ನಲ್ಲಿ ಜಾಹೀರಾತು ವೀಕ್ಷಿಸಿ, ಲಿಂಕ್ ಕ್ಲಿಕ್ ಮಾಡಿದ್ದಾರೆ. ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸಿದ ಅಪರಿತ ಪಾಸ್ಪೋರ್ಟ್ ಸೇರಿದಂತೆ ವಿವಿಧ ಕೆಲಸಕ್ಕೆ ಹಣ ಬೇಕೆಂದು ಕೇಳಿದ್ದಾನೆ. ಆನ್ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕ ಆತ್ಮಹತ್ಯೆ: ತಾಲ್ಲೂಕಿನ ಕುಸುಗಲ್ ಗ್ರಾಮದಲ್ಲಿ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗ್ರಾಮದ ಅರುಣಗೌಡ ಕೆಂಚನಗೌಡರ (17) ಮೃತರು. ಕಳೆನಾಶಕ ಸೇವಿಸಿ ಅಸ್ವಸ್ಥನಾಗಿದ್ದ ಆತನನ್ನು ನಗರದ ಕೆಎಂಸಿ–ಆರ್ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಲಿಕೆ ಸ್ಥಳದಲ್ಲಿ ಗಣೇಶ ಮೂರ್ತಿ; ದೂರು: ಇಲ್ಲಿಯ ಸೋನಿಯಾ ಗಾಂಧಿ ನಗರದ ಇಂದಿರಾ ಕ್ಯಾಂಟೀನ್ ಎದುರಿನ ಹು–ಧಾ ಮಹಾನಗರ ಪಾಲಿಕೆ ಜಾಗದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದವರ ವಿರುದ್ಧ ದೂರು ದಾಖಲಿಸಲಾಗಿದೆ.
ಗಣೇಶ ನಾಯ್ಡು ಸೇರಿದಂತೆ ಹಲವರು ಪಾಲಿಕೆಯ ಅನುಮತಿ ಪಡೆಯದೇ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ ಎಂದು ವಲಯ ಸಹಾಯಕ ಆಯುಕ್ತ ಜಗದೀಶ ದೊಡ್ಡಮನಿ ದೂರಿನಲ್ಲಿ ತಿಳಿಸಿದ್ದಾರೆ.
ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.