ADVERTISEMENT

ಹುಬ್ಬಳ್ಳಿ: ಕೋರ್ಸ್‌ವೊಂದಕ್ಕೆ ಪ್ರವೇಶ ಕೊಡಿಸುವುದಾಗಿ ₹8.85 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 4:29 IST
Last Updated 25 ಫೆಬ್ರುವರಿ 2022, 4:29 IST

ಹುಬ್ಬಳ್ಳಿ: ಥಾಯ್ಲೆಂಡ್‌ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜಿನಲ್ಲಿ ಕೋರ್ಸ್‌ವೊಂದಕ್ಕೆ ಪ್ರವೇಶ ಕೊಡಿಸುವುದಾಗಿ ನಗರದ ತಬೀಬ್‌ ಲ್ಯಾಂಡ್‌ನ ರೋಹಿತ್‌ಕುಮಾರ ಕಲಸ್ಕರ್ ಎಂಬುವರಿಗೆ ₹8.85 ಲಕ್ಷ ವಂಚನೆ ಮಾಡಲಾಗಿದೆ.

ಅಸ್ಸಾಂ ರಾಜ್ಯದ ಕೋಕ್ರಬಾರ್‌ನಲ್ಲಿ ನೆಲೆಸಿದ್ದ ಸುರೇಶಗೋವಿಂದರಾಜ ಎಂಬಾತ ರೋಹಿತ್‌ ಅವರಿಂದ 2017ರಲ್ಲಿ ಹಣ ಪಡೆದು ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ಕೋಕ್ರಬಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲಿನ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣವನ್ನು ಇಲ್ಲಿಗೆ ವರ್ಗಾಯಿಸಲಾಗಿದ್ದು, ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ: ಇಲ್ಲಿಯ ಬಂಕಾಪುರ ಚೌಕ್‌ದಲ್ಲಿರುವ ದಿವಾನ್ ಚಾಚಾ ದರ್ಗಾ ಎದುರಿನ ಅಂಗಡಿಯೊಂದರಲ್ಲಿ ಗೋಡೆ ಕೊರೆದು ₹40 ಸಾವಿರ ಮೌಲ್ಯದ ತಾಮ್ರದ ಪೈಪ್‌ ಕಳ್ಳತನ ಮಾಡಲಾಗಿದೆ.

ADVERTISEMENT

ಅಂಗಡಿ ಕೇಶ್ವಾಪುರದ ಜಿತೇಂದ್ರ ಜೈನ್ ಎಂಬುವರಿಗೆ ಸೇರಿದ್ದು, ರಾತ್ರಿ ಕಳ್ಳರು ಗೋದಾಮಿನ ಗೋಡೆ ಕೊರೆದು ಕೃತ್ಯ ಎಸಗಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ: ನಾಲ್ಕು ಮೊಬೈಲ್‌ ಫೋನ್‌ಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಅಶೋಕನಗರ ಠಾಣೆ ಪೊಲೀಸರು ದೇವಾಂಗಪೇಟೆ ಸಮೀಪದ ಸಿಲ್ವರ್‌ ಪಾರ್ಕ್‌ ಹತ್ತಿರ ಬಂಧಿಸಿದ್ದಾರೆ.

ಗೋಪನಕೊಪ್ಪದ ಗೌಡರ ಓಣಿ ನಿವಾಸಿ ಅಭಿಷೇಕ ಸಂತೇಬೆನ್ನೂರು ಬಂಧಿತ. ಈತನಿಂದ ವಿವಿಧ ಕಂಪನಿಗಳಿಗೆ ₹11,500 ಮೌಲ್ಯದ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೈಕ್‌ ಕಳ್ಳತನ: ಸವದತ್ತಿ ಕಡೆ ಹೋಗುವ ರಸ್ತೆಯ ಬದಿಯ ಹೊಲಗಳಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದ್ದು, ಇವರಿಂದ ನಾಲ್ಕು ದ್ವಿಚಕ್ರ ವಾಹನಗಳನ್ನು ಗೋಕುಲಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

ಮೂವರು ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಜಗಳವಾಡುತ್ತಿದ್ದರು. ಇದನ್ನು ಕಂಡ ಪೊಲೀಸರು ಅವರನ್ನು ವಿಚಾರಣೆ ಮಾಡಿದಾಗ ಬೈಕ್‌ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೃತ: ಕುಸುಗಲ್‌–ಬ್ಯಾಹಟ್ಟಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ದ್ವಿಚಕ್ರ ವಾಹನಕ್ಕೆ ಗುದ್ದಿದ ಘಟನೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಹುಬ್ಬಳ್ಳಿ ತಾಲ್ಲೂಕಿನ ಭಂಡಿವಾಡ ಗ್ರಾಮದ ಬಸವರಾಜ ಶಂಕ್ರಪ್ಪ ಕಮತರ (32) ಮೃತಪಟ್ಟವರು. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.