ಧಾರವಾಡ: ‘ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಗಮದಲ್ಲಿಟ್ಟುಕೊಂಡು ಡಿಗ್ನಿಟಿ ಆಫ್ ಇಂಡಿವಿಜ್ಯುಯಲ್ ಪ್ರತಿಷ್ಠಾನ ಆರಂಭಿಸಲಾಗಿದೆ’ ಎಂದು ಸ್ನೈಡರ್ ಎಲೆಕ್ಟ್ರಿಕ್ ಇಂಡಿಯಾ ಪ್ರತಿಷ್ಠಾನದ ಸಿಇಒ ಅಭಿಮನ್ಯು ಸಾಹು ಹೇಳಿದರು.
ಇಲ್ಲಿನ ಓಸ್ವಾಲ್ ಟವರ್ನಲ್ಲಿ ಪ್ರಾರಂಭವಾದ ಪ್ರತಿಷ್ಠಾನದ ಉದ್ಘಾಟನೆಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಕೌಶಲ್ಯ ಕುಟೀರದಲ್ಲಿ ಅವರು ಮಾತನಾಡಿ, ‘ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಸಂಸ್ಥೆಯು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಒದಗಿಸಿಕೊಡಲು ಅಥವಾ ಸ್ವ ಉದ್ಯೋಗ ಹೊಂದಲು ಸ್ನೈಡರ್ ಕಂಪನಿಯು ಅಗತ್ಯ ಸಹಕಾರವನ್ನು ನೀಡಲಿದೆ’ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಸಿಸ್ಟಂಟ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಅರುಣ್ ಜೋಶಿ ಮಾತನಾಡಿ, ‘ನಿರುದ್ಯೋಗಿ ಯುವ ಜನತೆಗೆ ಉಚಿತ ತರಬೇತಿ ನೀಡುವುದಲ್ಲದೆ ಅವರಿಗೆ ಉದ್ಯೋಗ ಒದಗಿಸಿಕೊಡುವ ಸಂಸ್ಥೆಯೊಂದು ಧಾರವಾಡದಲ್ಲಿ ಆರಂಭವಾಗುತ್ತಿರುವುದು ಶ್ಲಾಘನೀಯ’ ಎಂದರು.
ಧಾರವಾಡದ ಫ್ಲೀಟ್ಗಾರ್ಡ್ ಫಿಲ್ಟರ್ಸ್ ಕಂಪನಿಯ ಮುಖ್ಯಸ್ಥ ಪ್ರಕಾಶ ಮಾಯಾಚಾರಿ ಅವರು ಸಂಸ್ಥೆಯ ಜಾಲತಾಣಕ್ಕೆ ಚಾಲಣೆ ನೀಡಿದರು. ಟಾಟಾ ಹಿಟಾಚಿಯ ಸಿಎಸ್ಆರ್ ಘಟಕದ ಮುಖ್ಯಸ್ಥ ಪ್ರಶಾಂತ್ ದೀಕ್ಷಿತ್, ಧಾರವಾಡದ ನೇಚರ್ ಫಸ್ಟ್ ಸಂಸ್ಥಾಪಕ ಪಿ. ವಿ. ಹಿರೇಮಠ, ಓಸ್ವಾಲ್ ಟವರ್ಸ್ ಮಾಲಿಕ ಮೋಹನ್ಲಾಲ್ ಭಂಡಾರಿ, ಸಂಸ್ಥೆಯ ಸಂಸ್ಥಾಪಕ ಜಗದೀಶ್ ನಾಯ್ಕ್ ಹಾಗೂ ಸತೀಶ್ ಮೂಡಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.