
ಉಪ್ಪಿನಬೆಟಗೇರಿ ಗ್ರಾಮದ ಗೌರಿಮಠದವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಗೌರಿ
(ಸಂಗ್ರಹಚಿತ್ರ)
ಉಪ್ಪಿನಬೆಟಗೇರಿ: ಗೌರಿಹುಣ್ಣಿಮೆ ಬಂತೆಂದರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಡಗರ ಸಂಭ್ರಮ ಮನೆ ಮಾಡಿರುತ್ತದೆ. ಗೌರಿ ಹುಣ್ಣಿಮೆಯನ್ನು ನ.5ರಂದು ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಗೌರಿ ಹುಣ್ಣಿಮೆಯನ್ನು ದೊಡ್ಡ ಗೌರಿ ಹಬ್ಬವೆಂದು ಆಚರಿಸುವುದು ವಾಡಿಕೆ. ಹೆಣ್ಣು ಮಕ್ಕಳು ಸಕ್ಕರೆ ಆರತಿಯನ್ನು ತಟ್ಟೆಯಲ್ಲಿಟ್ಟುಕೊಂಡು, ತಲೆಯ ಮೇಲೆ ದಂಡೆ ಹಾಕಿಕೊಂಡು ಗೌರಿ ಹಾಡನ್ನು ಹಾಡುತ್ತಾ, ಗೌರಿ ಪ್ರತಿಷ್ಠಾಪನೆ ಮಾಡಿರುವ ಮನೆಗಳಿಗೆ ತೆರಳಿ ಆರತಿ ಮಾಡುತ್ತಾರೆ.
ಸಕ್ಕರೆ ಆರತಿಯನ್ನು ಮಾವ, ಸಹೋದರ ಸೇರಿದಂತೆ ವಿವಿಧ ಸಂಬಂಧಿಕರು ಖರೀದಿಸಿ ತಮ್ಮ ಆಪ್ತರಿಗೆ ಕಳುಹಿಸಿ ಕೊಡುವುದು ಈ ಹಬ್ಬದ ವಿಶೇಷವಾಗಿದೆ.
ಸಕ್ಕರೆಪಾಕದಿಂದ ಅಚ್ಚಿನಲ್ಲಿ ತಯಾರಿಸಿದ ನವಿಲು, ಆನೆ, ಒಂಟೆ, ಗೋಪುರ, ಬಸವ, ರಥ, ಶಿವ, ಪಾರ್ವತಿ, ಕೃಷ್ಣನ ಆಕಾರಗಳ ಬಣ್ಣ, ಬಣ್ಣದ ಬೊಂಬೆಗಳು ಮಾರುಕಟ್ಟೆಯಲ್ಲಿ ಆಕರ್ಷವಾಗಿ ಮಾರಾಟಕ್ಕೆ ಇಟ್ಟಿರುತ್ತಾರೆ. ಕೆಲವರು ಸಕ್ಕರೆ ಆರತಿ ಮಾರುವವ ಬಳಿ ತೆರಳಿ ತಾವೇ ಸಕ್ಕರೆ ನೀಡಿ ಮೂರ್ತಿಗಳನ್ನು ತಯಾರಿಸಿಕೊಂಡು ಬರುತ್ತಾರೆ.
ಗ್ರಾಮದಲ್ಲಿ ಗೌರಮ್ಮನ ಮೂರ್ತಿಯನ್ನು ಗೌರಿಮಠ, ವಿರಕ್ತಮಠ, ಗಣಪತಿಗುಡಿ, ವೀರಭದ್ರೇಶ್ವರ ದೇವಸ್ಥಾನದಲ್ಲಿ 5, 7, 9 ದಿನಗಳವರೆಗೆ ಪ್ರತಿಷ್ಠಾಪನೆ ಮಾಡುತ್ತಾರೆ. ಗೌರಿಗೆ ಹೊಸ ಸೀರೆ ಉಡಿಸಿ, ಉಡಿ ತುಂಬಿ ಮಹಿಳೆಯರಿಗೆ ಬಾಗಿನ ನೀಡಿ ಗೌರಿಯನ್ನು ಹೊಳೆಗೆ ಕಳುಹಿಸುತ್ತಾರೆ.
ಹೂವು, ಹಣ್ಣು, ನೈವೇದ್ಯೆ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಗೌರಿಯು ಹೊಳೆಗೆ ಹೋಗುವ ದಿನ ಓಣಿಯ ಮನೆಗಳಿಗೆ ಹೋಗಿ ಹೇಳಲಾಗುತ್ತದೆ. ಮನೆಯವರಿಂದ ಹಣ, ಕಾಳು, ಕಡಿ ಸಂಗ್ರಹಿಸುತ್ತಾರೆ. ಭಜನಾ ಮಂಡಳಿಯವರು ಪೂಜಾ ಸಾಮಗ್ರಿ, ಗುಗ್ಗಳ ಕೊಡ, ಬಟ್ಟೆ ಹಾಗೂ ಪೂಜಾ ಸಾಮಗ್ರಿ ಖರೀದಿಸುತ್ತಾರೆ. ಓಣಿಯ ಮನೆಯವರು ನೈವೇದ್ಯೆ ಮಾಡಿ ಗೌರಿಗೆ ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ.
ರಾತ್ರಿ ವೇಳೆ ಓಣಿಯ ಜನರು ಗುಗ್ಗಳ ಕೊಡ ಹೊತ್ತುಕೊಂಡು ಭಜನೆ ಮಾಡುತ್ತ ಹೊಳೆಗೆ ತೆರಳಿ ಪೂಜೆ ಸಲ್ಲಿಸಿ ಬಿಟ್ಟು ಬರುವ ಸಂಪ್ರದಾಯವಿದೆ.
ಗೌರಮ್ಮನ ಮೂರ್ತಿ ಪ್ರತಿಷ್ಠಾಪಿಸಿ ಶತಮಾನಗಳಿಂದ ಪೂಜಿಸಿಕೊಂಡು ಬರಲಾಗುತ್ತದೆ. ಇಂದಿಗೂ ಆ ಆಚರಣೆ ಸಂಪ್ರದಾಯಬದ್ಧವಾಗಿ ನಮ್ಮೂರಲ್ಲಿ ನಡೆಯುತ್ತದೆಬಸಲಿಂಗಯ್ಯ ಗೌರಿಮಠ ಗ್ರಾಮಸ್ಥರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.