ADVERTISEMENT

ಸಾಮಾಜಿಕ ತಾಣದಲ್ಲಿ ‘ಗೋ ಬ್ಯಾಕ್‌ ನಾಗರಾಜ್’ ಅಭಿಯಾನ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 11:02 IST
Last Updated 29 ಏಪ್ರಿಲ್ 2019, 11:02 IST

ಹುಬ್ಬಳ್ಳಿ: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಪ್ರಚಾರ ಸಂಚಾಲಕರಾಗಿದ್ದ ಮಾ. ನಾಗರಾಜ ಅವರ ವಿರುದ್ಧ ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ‘ಮಾ ನಾಗರಾಜ್‌ ಹಠಾವೊ, ಧಾರವಾಡ ಬಿಜೆಪಿ ಬಚಾವೊ’ ಎಂದು ಕೆಲ ಬಿಜೆಪಿ ಬೆಂಬಲಿಗರು ಫೇಸ್‌ಬುಕ್‌ನಲ್ಲಿ ಬರೆದುಕೊಂಡು ಅಭಿಯಾನ ನಡೆಸುತ್ತಿದ್ದಾರೆ.

ಪವನ್‌ ಕುಮಾರ್‌ ಹಳಿಯಾಳ ಎಂಬುವರು ನಾಗರಾಜ ಅವರ ಫೋಟೊ ಹಾಕಿ ‘ಕಾರ್ಯಕರ್ತರು ಪಕ್ಷದ ಬೇರು ಮತ್ತು ಬೆನ್ನೆಲುಬು. ಮಾನ್ಯ ಶ್ರೀ ಪ್ರೊ. ಮಾ. ನಾಗರಾಜರವರೇ ನೀವು ಉನ್ನತ ಸ್ಥಾನ ಪಡೆದಿದ್ದು ಕಾರ್ಯಕರ್ತರ ಆಶೀರ್ವಾದ ಮತ್ತು ಬೆಂಬಲದಿಂದ. ನೀವು ಈ ಮಟ್ಟಕ್ಕೆ ರಾಜಕೀಯದಲ್ಲಿ ಬೆಳೆದಿರುವಿರಿ. ನಿಮ್ಮ ದ್ವಂದ್ವ ನೀತಿಯ ರಾಜಕೀಯಕ್ಕೆ ಸಂಘಟನೆಯ ಕಾರ್ಯಕರ್ತರನ್ನು ಬಲಿಪಶು ಮಾಡಬೇಡಿ’ ಎಂದು ಬರೆದಿದ್ದಾರೆ. ಇದನ್ನು ಅವರು ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಪ್ರೀತಮ್‌ ಅರಕೇರಿ ಎಂಬುವರು ‘ನಾಗರಾಜ ಹಠಾವೊ. ನಮ್ಮ ಜಿಲ್ಲೆಗೆ ನಿಮ್ಮ ಅವಶ್ಯಕತೆ ಇಲ್ಲ’ ಎಂದು ಬರೆದುಕೊಂಡಿದ್ದಾರೆ. ಮಣಿ ಶ್ಯಾಗೋಟಿ ಎಂಬುವರು ‘ಧಾರವಾಡ ಜಿಲ್ಲಾ ಬಿಜೆಪಿ ಕುಟುಂಬ ಒಡೆಯುತ್ತಿರುವ ನಾಗರಾಜ್ ಗೋ ಬ್ಯಾಕ್‌’ ಎಂದು ಬರೆದು ಬಿಜೆಪಿ ಕಲಘಟಗಿ ಫೇಸ್‌ಬುಕ್‌ ಪುಟಕ್ಕೆ ಟ್ಯಾಗ್‌ ಮಾಡಿದ್ದಾರೆ. ಈ ಎಲ್ಲ ಪೋಸ್ಟ್‌ಗಳಿಗೂ ಪರ, ವಿರೋಧ ಅಭಿಪ್ರಾಯ ವ್ಯಕ್ತವಾಗಿವೆ.

ADVERTISEMENT

ಇದರ ಬಗ್ಗೆ ಜಿಲ್ಲೆಯ ಬಿಜೆಪಿ ಮುಖಂಡರೊಬ್ಬರನ್ನು ಮಾತನಾಡಿಸಿದಾಗ ‘ಮಹೇಶ ನಾಲವಾಡ ಪಕ್ಷ ಸೇರಿದ ಬಳಿಕ ಸೆಂಟ್ರಲ್‌ ಕ್ಷೇತ್ರದಲ್ಲಿ ಬಿಜೆಪಿ ವರ್ಚಸ್ಸು ಹೆಚ್ಚಾಗಿದೆ ಎಂದು ಹೇಳಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಆದ್ದರಿಂದ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ’ ಎಂದರು.

ಇದರ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಾ. ನಾಗರಾಜ್ ‘ನಾನು ಯಾವ ಹೇಳಿಕೆ ನೀಡಿಲ್ಲ. ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವುದು ಉಹಾಪೋಹ. ಜಿಲ್ಲೆಯ ಯಾವ ನಾಯಕರ ಬಗ್ಗೆಯೂ ನಕಾರಾತ್ಮಕವಾಗಿ ಮಾತನಾಡಿಲ್ಲ. ನಮ್ಮ ನಾಯಕರಾದ ಜಗದೀಶ ಶೆಟ್ಟರ್ ಹಾಗೂ ಪ್ರಹ್ಲಾದ ಜೋಶಿ ಅವರೊಂದಿಗೆ ಇದರ ಬಗ್ಗೆ ಚರ್ಚಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.