ಹುಬ್ಬಳ್ಳಿ: ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ (ವೇತನ, ನಿವೃತ್ತಿ ವೇತನ ಇತರೆ ಸೌಲಭ್ಯಗಳ ನಿಯಂತ್ರಣ) ವಿಧೇಯಕಕ್ಕೆ 2014ರ ಡಿಸೆಂಬರ್ನಲ್ಲಿ ₹351.80 ಕೋಟಿ ಒದಗಿಸಲು ವಿಧಾನಪರಿಷತ್ನಲ್ಲಿ ಅನುಮೋದನೆ ನೀಡಲಾಗಿದ್ದು, ಈ ಅನುದಾನವನ್ನು ಆದಷ್ಟು ಬೇಗನೆ ಬಿಡುಗಡೆ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಆಗ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಅಂದಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಅವರು ಅನುದಾನ ಒದಗಿಸುವ ಭರವಸೆ ನೀಡಿದ ಬಳಿ ಪರಿಷತ್ನಲ್ಲಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿತ್ತು. ಸದನ ಸಮಿತಿಗೆ ಸಲ್ಲಿಸಿದ ವರದಿಯು ಈಗ ವಿಧಾನ ಪರಿಷತ್ತಿನ ಆಸ್ತಿಯಾಗಿದ್ದು, ಸರ್ಕಾರ ನೀಡಿದ ಭರವಸೆಯಂತೆ ವಿಶೇಷ ಸದನ ಸಮಿತಿಯ ವರದಿ ಒಪ್ಪಿ ಆದೇಶ ಹೊರಡಿಸಬೇಕು ಎಂದಿದ್ದಾರೆ.
ವರದಿಯನ್ನು ತ್ರಿಶಂಕು ಸ್ಥಿತಿಯಲ್ಲಿಡದೇ ಸರ್ಕಾರ ಈ ಕುರಿತು ಆಂತಿಮ ಆದೇಶ ಹೊರಡಿಸಬೇಕು. ತಾನೇ ಕೊಟ್ಟ ಭರವಸೆಯನ್ನು ಜಾರಿಗೊಳಿಸಿ 25 ಸಾವಿರ ಅನುದಾನಿತ ಶಾಲೆಗಳ ನೌಕರರ ಬದುಕಿಗೆ ಹೊಸ ಬೆಳಕು ಮೂಡಿಸಬೇಕು ಎಂದು ಹೇಳಿದ್ದಾರೆ. ಈ ಕುರಿತು ಚರ್ಚಿಸಲು ಸಕಾರಾತ್ಮಕ ಮಾಹಿತಿ ಮತ್ತು ನಿಮ್ಮೊಂದಿಗೆ ಸಭೆ ನಡೆಸಲು ದಿನಾಂಕ ಗೊತ್ತು ಪಡಿಸಬೇಕು ಬೊಮ್ಮಾಯಿ ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.