
ಉಪ್ಪಿನಬೆಟಗೇರಿ: ಮಹಾಶಿವರಾತ್ರಿ ಅಂಗವಾಗಿ ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿಯ 2ನೇ ವರ್ಷದ ಜಾತ್ರಾ ಮಹೋತ್ಸವದ ರಥೋತ್ಸವ ಭಾನುವಾರ ಭಕ್ತರ ಜೈಘೋಷಗಳ ನಡುವೆ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ಶಿವಲಿಂಗದ ಮೂರ್ತಿಗೆ ರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ ಸಹಿತ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಅರ್ಚಕರ ನೇತೃತ್ವದಲ್ಲಿ ನೆರವೇರಿಸಲಾಯಿತು. ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ 5.30ಕ್ಕೆ ಸಕಲ ವಾದ್ಯ ವೈಭವದೊಂದಿಗೆ ಆರಂಭವಾದ ರಥೋತ್ಸವಕ್ಕೆ ಗೊಂದಾವಳಿ ಬ್ರಹ್ಮಚೈತನ್ಯ ಆಶ್ರಮದ ದತ್ತಾವದೂತ ಮಹಾರಾಜ ಹಾಗೂ ನಾಡಿನ ವಿವಿಧ ಸ್ವಾಮೀಜಿಗಳು ಚಾಲನೆ ನೀಡಿದರು.
ದೇವಸ್ಥಾನದಿಂದ ಬಸ್ ನಿಲ್ಧಾಣದವರೆಗೆ ರಥ ಎಳೆದ ಭಕ್ತರು, ಮೂಲ ಸ್ಥಳಕ್ಕೆ ತಂದರು. ಭಕ್ತರು ತೇರಿಗೆ ಬಾಳೆಹಣ್ಣು, ಉತ್ತತ್ತಿ, ನಿಂಬೆ ತೂರಿ ಭಕ್ತಿ ಸಮರ್ಪಿಸಿದರು. ರಥ ನಿರ್ಮಾಣ ಮಾಡಿರುವ ಸಾವಿತ್ರಿ ಮಟ್ಟಿ, ಚೆನ್ನಬಸಪ್ಪ ಮಟ್ಟಿ ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ಫೆ.16 ರಂದು ಕಡುಬಿನ ಕಾಳಗ ಮಲ್ಲಿಕಾರ್ಜುನ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ವೈದ್ಯ ವೇದವ್ಯಾಸ ದೇಶಪಾಂಡೆ, ಚನ್ನಮಲ್ಲಿಕಾರ್ಜುನಯ್ಯ ನಂದಿಕೋಲಮಠ, ನಾಗಯ್ಯ ಕೊಣ್ಣೂರಮಠ, ಪುನೀತ ಹಿರೇಮಠ, ಚನ್ನಮಲ್ಲಿಕಾರ್ಜುನ ಹೂಗಾರ, ಶ್ರೀಶೈಲ ಲಕ್ಕಮ್ಮನವರ, ಸಂಜೀವ ಮೊರಬದ, ಬಸವರಾಜ ಚುಳಕಿ, ಯೋಗಿಶ ದೇಸಾಯಿ, ಕಿರಣ ಹೂಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.