ಗುಡಗೇರಿ: ಕಳೆದ ಹನ್ನೊಂದು ತಿಂಗಳಿನಿಂದಶಾಲೆಯ ಮುಖವನ್ನೇ ನೋಡದ ವಿದ್ಯಾರ್ಥಿಗಳು ಶಾಲೆಗೆ ಬಂದಾಗ ಬಣ್ಣ ಬಣ್ಣ ಚಿತ್ತಾರ ಕಂಡು ಖುಷಿ ಪಟ್ಟರು. ಕುಂದಗೋಳ ತಾಲ್ಲೂಕಿನಹಿರೇಹರಕುಣಿ-ಹುಬ್ಬಳ್ಳಿ ಮಾರ್ಗದಲ್ಲಿ ಓಡಾಡುವ ಬಸ್ಸಿನ ಮಾದರಿಯಲ್ಲಿಯೇ ಶಾಲೆಯನ್ನು ಸುಂದರಗೊಳಿಸಿರುವುದನ್ನು ಕಂಡು ಸಂಭ್ರಮಿಸಿದರು.
ಹಿರೇಹರಕುಣಿ ಗ್ರಾಮದ ಸರ್ಕಾರಿಕಿರಿಯ ಪ್ರಾಥಮಿಕ ಶಾಲೆ ತನ್ನ ಹಳೆಯ ಬಣ್ಣ ಕಳಚಿಕೊಂಡು ಇದೀಗ ಸಾರಿಗೆ ಬಸ್ಸಿನ ಮಾದರಿಯಲ್ಲಿ ಬಣ್ಣ ಬಳಿದುಕೊಂಡು ಕಂಗೊಳಿಸುತ್ತಿದೆ.ಒಳಭಾಗದಲ್ಲಿ ಯೋಗಾಸನದ ಭಂಗಿಗಳು,ವಿವಿಧ ಪ್ರಾಣಿಗಳ ಚಿತ್ರಗಳು ಮಕ್ಕಳನ್ನು ಆಕರ್ಷಿಸುತ್ತಿವೆ.
ತಾಲ್ಲೂಕಿನಲ್ಲಿ ವಿನೂತನ ಪ್ರಯೋಗದೊಂದಿಗೆ ಜ್ಞಾನ ನೀಡುವ ಸರ್ಕಾರಿ ಶಾಲೆ ಆಕರ್ಷಣೆಗೊಂಡು ಮಕ್ಕಳನ್ನು ಕೈ ಬೀಸಿ ಕರೆಯುತ್ತಿದೆ. ಇಲ್ಲಿ 1ರಿಂದ 5ನೇ ತರಗತಿಯವರೆಗೆ ಶಾಲೆಯಿದ್ದು 100 ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಿಕಾ ಎಸ್.ಜಿ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ ‘ಶಾಲೆಗೆ ಬಣ್ಣ ಹಚ್ಚಿಸಲು ಸರ್ಕಾರದಿಂದ ₹20 ಸಾವಿರ ಅನುದಾನ ಬಂದಿದೆ. ಹಲವೆಡೆ ರೈಲಿನ ಮಾದರಿ ಹಾಗೂ ಇನ್ನಿತರ ಕಲಾಕೃತಿಗಳೊಂದಿಗೆ ಗೋಡೆಗಳಿಗೆ ಬಣ್ಣ ಹಚ್ಚ ಅಂದಗೊಳಿಸಲಾಗಿದೆ. ಇದರಿಂದ ಮಕ್ಕಳ ಓದಿಗೆ ಚೆಂದದ ವಾತಾವರಣ ರೂಪಿಸಿ ಓದಲು ಪ್ರೇರೇಪಿಸಿದಂತೆ ಆಗುತ್ತದೆ. ಸರ್ಕಾರದ ಅನುದಾನದ ಜೊತೆಗೆ ಸ್ವಂತ ₹15 ಸಾವಿರ ಖರ್ಚು ಮಾಡಿ ವಿಭಿನ್ನವಾದ ಚಿತ್ರಣ ನೀಡಿದ್ದೇನೆ’ ಎಂದರು. ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕೆಲಸ ಮಾಡುತ್ತಿದ್ದು,ಆರ್.ಎಸ್. ಹಿರೇಮಠ ಇನ್ನೊಬ್ಬ ಶಿಕ್ಷಕರು.
ಬಿಇಒಜಿ.ಎನ್.ಮಠಪತಿ ಶಾಲೆಗೆ ಭೇಟಿ ನೀಡಿ ಶಿಕ್ಷಕರ ಆಸಕ್ತಿಗೆ ಅಭಿನಂದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.