
ಧಾರವಾಡದ ಸಪ್ತಾಪುರ ಬಾವಿಯಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್ ಬಾಟಲಿಗಳು ತುಂಬಿವೆ
ಒಂದು ಕಾಲದಲ್ಲಿ ಇಡೀ ಧಾರವಾಡ ನಗರಕ್ಕೆ ಕುಡಿಯುವ ನೀರಿನ ದಾಹ ತೀರಿಸಿದ ಬಾವಿಗಳಲ್ಲಿ ಸ್ವಚ್ಛತೆಯ ಕೊರತೆ ಕಾಡುತ್ತಿದೆ. ಕೆಲ ಬಾವಿಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ.
ನಗರದ ಪ್ರಮುಖ ಬಾವಿಗಳಲ್ಲಿ ಸಪ್ತಾಪುರ ಬಾವಿಯೂ ಒಂದು. 1942ರಲ್ಲಿ ನಿರ್ಮಿಸಲಾದ ಈ ಬಾವಿಯು ಸಪ್ತ ನಗರಗಳಿಗೆ ಕುಡಿಯುವ ನೀರು ಒದಗಿಸುವ ಕಾರಣ ‘ಸಪ್ತಾಪುರ ಬಾವಿ’ ಎಂಬ ಹೆಸರು ಬಂತು ಎಂಬುದು ಸ್ಥಳೀಯರ ಮಾತು.
ವಿದ್ಯಾಕಾಶಿ ಎಂದು ಪ್ರಸಿದ್ಧಿ ಪಡೆದ ಧಾರವಾಡ ನಗರದಲ್ಲಿ ‘ಸಪ್ತಾಪುರ ಬಾವಿ’ ಎಂದು ಸ್ಥಳ ಗುರುತಿಸಲು ಮಾತ್ರ ಇರುವ ಈ ಬಾವಿಯಲ್ಲಿ ಅಂಗಡಿ ತ್ಯಾಜ್ಯ, ಕಸ, ಪ್ಲಾಸ್ಟಿಕ್ ಬಾಟಲಿಗಳು ತುಂಬಿದ್ದು, ಬಾವಿಯು ಸ್ವಚ್ಛತೆಯಿಂದ ವಂಚಿತಗೊಂಡಿದೆ.
ನಗರದಲ್ಲಿ ಇದೊಂದೇ ಪ್ರಾಚೀನ ಬಾವಿಯಲ್ಲ. ನುಚ್ಚಂಬ್ಲಿ ಬಾವಿ, ಕೊಪ್ಪಮ್ಮನ ಬಾವಿ, ಅಗಸರ ಬಾವಿ, ಉಡುಪಿರಾಯರ ಬಾವಿ ಎಂಬ ಅನೇಕ ಬಾವಿಗಳಿವೆ. ಇವುಗಳ ಆಳ, ಅಳತೆ ಮತ್ತು ಬಳಕೆಗಳ ಕುರಿತ ಸಂಪೂರ್ಣ ಇತಿಹಾಸ ನ.ಹ. ಕಟಗೇರಿ ಅವರು ಬರೆದ ‘ಗತಕಾಲದ ಧಾರವಾಡ’ ಪುಸ್ತಕದಲ್ಲಿ ಉಲ್ಲೇಖವಿದೆ.
17ನೇ ಶತಮಾನದಲ್ಲಿ ನಿರ್ಮಿಸಲಾದ ನುಚ್ಚಂಬ್ಲಿ ಬಾವಿಯು ಧಾರವಾಡ ನಗರದಲ್ಲಿ ಪ್ರಮುಖ ಬಾವಿಯಾಗಿದ್ದು, ಇದೀಗ ಸಾರ್ವಜನಿಕ ಗಣಪತಿ ವಿಸರ್ಜನೆಗೆ ಮಾತ್ರ ಸೀಮಿತವಾಗಿದೆ. ಈ ಬಾವಿಯನ್ನು ಮಹಾನಗರ ಪಾಲಿಕೆ ವತಿಯಿಂದ 2017ರಲ್ಲಿ ಅಭಿವೃದ್ಧಿ ಕಾಮಗಾರಿ ಮತ್ತು ಹೂಳೆತ್ತುವ ಕಾರ್ಯ ನಡೆಸಲಾಗುತ್ತದೆ.
ಪ್ರಾಚೀನ ಕಾಲದಲ್ಲಿ ನಿರ್ಮಿಸಲಾದ ಕೆಲ ಬಾವಿಗಳು ರಸ್ತೆ ಮಧ್ಯದಲ್ಲಿದ್ದು, ಅನೇಕ ಕಾರಣ ಸೂಚಿಸಿ ಸ್ಥಳೀಯ ಆಡಳಿತ ವತಿಯಿಂದ ಮುಚ್ಚಿ ಹಾಕಲಾಗಿದೆ. ಆಧುನಿಕತೆ ಭರದಲ್ಲಿ ಸಾಗಿದ ಜಗತ್ತಿನಲ್ಲಿ ಬಾವಿಗಳ ಅಸ್ತಿತ್ವ ಕಣ್ಮರೆ ಅಗುತ್ತಿರುದು ಶೋಚನೀಯ.
ಬಾವಿ ಸ್ವಚ್ಛತೆಗೆ ಕ್ರಮ ಅಗತ್ಯ: ‘ಧಾರವಾಡ ನಗರದಾದ್ಯಂತ ಇರುವ ಬಾವಿಗಳ ಸ್ವಚ್ಛತೆ ಕಾಪಾಡಲು ಮಹಾನಗರ ಪಾಲಿಕೆ ಕ್ರಮ ಅಗತ್ಯ. ಬಾವಿಗಳ ಸ್ವಚ್ಛತೆ ಕೊರತೆಯಿಂದ ಮಲೇರಿಯಾ ಸೇರಿ ವಿವಿಧ ರೀತಿಯ ರೋಗ ಹರಡುವ ಭೀತಿಯಲ್ಲಿಯೇ ಸಾರ್ವಜನಿಕರು ಜೀವನ ನಡೆಸುವಂತಾಗಿದೆ. ಸ್ವಚ್ಛತೆ ಕುರಿತಾದ ನಾಮಫಲಕ ಅಳವಡಿಕೆ, ಬಾವಿ ಕಟ್ಟೆಗೆ ತಂತಿ ಬೇಲಿ ಅಳವಡಿಕೆ ಸೇರಿ ವಿವಿಧ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ’ ಎಂದು ಸ್ಥಳೀಯ ನಿವಾಸಿ ಫಕ್ಕೀರಪ್ಪ ಹಾದಿಮನಿ ಹೇಳಿದರು.