ಹುಬ್ಬಳ್ಳಿ: ‘ಹಿಂದೂಸ್ತಾನಿ ಸಂಗೀತದ ದಂತಕಥೆ ಗಂಗೂಬಾಯಿ ಹಾನಗಲ್ ಅವರು ಹುಟ್ಟಿ, ಬೆಳೆದ ಧಾರವಾಡದ ಶುಕ್ರವಾರಪೇಟೆಯಲ್ಲಿರುವ ಪೂರ್ವಜರ ಮನೆಯನ್ನು ಸರ್ಕಾರದಿಂದ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದರು.
ಇಲ್ಲಿನ ಅಶೋಕನಗರದ ಡಿ.ಎಸ್. ಕರ್ಕಿ ಕನ್ನಡ ಭವನದಲ್ಲಿ ವೈಷ್ಣವಿ ಗಂಗೂಬಾಯಿ ಹಾನಗಲ್ ಹೆರಿಟೇಜ್ ಟ್ರಸ್ಟ್ ಭಾನುವಾರ ಆಯೋಜಿಸಿದ್ಧ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯದ 18ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಗಂಗೂಬಾಯಿ ಅವರು ಈ ದೇಶದ ಆಸ್ತಿ. ಗಂಗೂಬಾಯಿ ಅವರ ಪೂರ್ವಜರ ಮನೆ ಶಿಥಿಲಾವಸ್ಥೆಯಲ್ಲಿರುವ ವಿಷಯ ಗೊತ್ತಿರಲಿಲ್ಲ. ಅವರು ನನಗೆ ತಾಯಿ ಇದ್ದಂತೆ. ಅವರೊಂದಿಗೆ ಹೆಚ್ಚು ಒಡನಾಟವಿತ್ತು. ಫೆ. 10ರಿಂದ ಅಧಿವೇಶನ ನಡೆಯಲಿದ್ದು, ಆಗ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಮನೆ ಜೀರ್ಣೋದ್ಧಾರ ಕಾಮಗಾರ ಕೈಗೊಳ್ಳಲು ನಿರ್ದೇಶನ ನೀಡುತ್ತೇನೆ’ ಎಂದು ಹೇಳಿದರು.
ವೈಷ್ಣವಿ ಹಾನಗಲ್ ಮತ್ತು ಶಿಷ್ಯವೃಂದದಿಂದ ಗಾಯನ ಜರುಗಿತು. ಮನುಕುಮಾರ ಹಿರೇಮಠ ತಬಲಾ ಮತ್ತು ಧಾರವಾಡದ ಸೃಷ್ಟಿ ಸುರೇಶ ಅವರು ಸಿತಾರ್ ವಾದನ ಪ್ರಸ್ತುತಪಡಿಸಿದರು. ಪ್ರಸಾದ ಮಡಿವಾಳರ ಮತ್ತು ಡಾ. ರಚನಾ ನಾಡಗಿರ್ ಹಾರ್ಮೋನಿಯಂನಲ್ಲಿ ಸಾಥ್ ನೀಡಿದರು.
ವಸಂತ ನಾಡಜೋಶಿ, ಮಹೇಶ ತಲಕಾಡು, ವೀಣಾ ನಾಡಗೀರ ಹಾಗೂ ನಳಿನಿ ಕೆಂಭಾವಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.