ADVERTISEMENT

ಹುಬ್ಬಳ್ಳಿ: ಕೃಷಿ ಹೊಂಡ ನಿರ್ಮಾಣದತ್ತ ರೈತರ ಚಿತ್ತ

ಜಿಲ್ಲೆಯಲ್ಲಿ 230 ಕೃಷಿ ಹೊಂಡಗಳ ನಿರ್ಮಾಣದ ಭೌತಿಕ ಗುರಿ

ಎಲ್‌.ಮಂಜುನಾಥ
Published 29 ಜನವರಿ 2026, 4:22 IST
Last Updated 29 ಜನವರಿ 2026, 4:22 IST
ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡ ಗ್ರಾಮದ ಜಮೀನಿನಲ್ಲಿ ಈಚೆಗೆ ರೈತರೊಬ್ಬರು ಕೃಷಿ ಹೊಂಡ ನಿರ್ಮಿಸಲು ಕ್ರಮವಹಿಸಿರುವುದು 
ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡ ಗ್ರಾಮದ ಜಮೀನಿನಲ್ಲಿ ಈಚೆಗೆ ರೈತರೊಬ್ಬರು ಕೃಷಿ ಹೊಂಡ ನಿರ್ಮಿಸಲು ಕ್ರಮವಹಿಸಿರುವುದು    

ಹುಬ್ಬಳ್ಳಿ: ಬೇಸಿಗೆ ದಿನಗಳು ಕ್ರಮೇಣ ಆರಂಭವಾಗುತ್ತಿದ್ದು, ಈ ದಿನಗಳಲ್ಲಿ ಬೆಳೆಗಳಿಗೆ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಕೆಲ ರೈತರು ಕೃಷಿ ಹೊಂಡಗಳ ನಿರ್ಮಾಣದತ್ತ ಗಮನಹರಿಸಿದ್ದಾರೆ. 

ಧಾರವಾಡ ಜಿಲ್ಲಾ ಕೃಷಿ ಇಲಾಖೆಯು ಕೃಷಿಹೊಂಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈತರಿಂದ ಈಗಾಗಲೇ ಅರ್ಜಿ ಆಹ್ವಾನಿಸಿದ್ದು, 550ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. 

ಕೃಷಿ ಭಾಗ್ಯ ಯೋಜನೆ ಅನುಷ್ಠಾನದ ನಂತರ ಜಿಲ್ಲೆಯಲ್ಲಿ ಇದುವರೆಗೆ 12,523 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 230 ಕೃಷಿ ಹೊಂಡಗಳ ನಿರ್ಮಾಣದ ಭೌತಿಕ ಗುರಿ ಹೊಂದಲಾಗಿದ್ದು, 158 ಕೃಷಿ ಹೊಂಡಗಳು ಪ್ರಗತಿಯಲ್ಲಿವೆ. 

ADVERTISEMENT

ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ) (ವಿಬಿ–ಜಿ ರಾಮ್‌ ಜಿ) ಅಡಿಯಲ್ಲಿಯೂ ಕೃಷಿ ಹೊಂಡ ನಿರ್ಮಿಸಿಕೊಳ್ಳಬಹುದು. 

ಸಹಾಯಧನ: ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳುವ ರೈತರಿಗೆ ಸಹಾಯಧನ ನೀಡಲಾಗುತ್ತಿದ್ದು, ಸಾಮಾನ್ಯ ವರ್ಗದ ರೈತರಿಗೆ ಶೇ 80ರಷ್ಟು ಹಾಗೂ ಪರಿಶಿಷ್ಟ ಸಮುದಾಯದ ರೈತರಿಗೆ ಶೇ 90ರಷ್ಟು ಸಹಾಯಧನ ನೀಡಲಾಗುತ್ತದೆ. 

‘ಫಲಾನುಭವಿಗಳು ಯೋಜನೆಯ ಸೌಲಭ್ಯ ಪಡೆಯಲು ಒಟ್ಟು 6 ಘಟಕಗಳನ್ನು ಕಡ್ಡಾಯವಾಗಿ ನಿರ್ಮಿಸಿಕೊಳ್ಳಬೇಕು. ಜಮೀನಿನಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಹೊಂಡದಲ್ಲಿ ಪಾಲಿಥಿನ್‌ ಹೊದಿಕೆ ಅಳವಡಿಕೆ, ಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣ, ಹೊಂಡದಿಂದ ನೀರು ಎತ್ತಲು ಡೀಸೆಲ್‌/ ಪೆಟ್ರೋಲ್‌ ಪಂಪ್‌ ಸೆಟ್‌ ಅಳವಡಿಕೆ. ನೀರನ್ನು ಬೆಳೆಗೆ ಹಾಯಿಸಲು ತುಂತುರು ಹನಿ ನೀರಾವರಿ ಅಳವಡಿಕೆ ಮಾಡಿಕೊಳ್ಳಬೇಕು‘ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು. 

ಫಸಲು ದ್ವಿಗುಣ: ‘ಕೃಷಿ ಹೊಂಡ ನಿರ್ಮಾಣದಿಂದ ಹಿಂಗಾರು ಬೆಳೆಗಳಿಗೆ ಸಾಕಷ್ಟು ಪ್ರಯೋಜನವಾಗಿದೆ. ಹಿಂಗಾರು ಅವಧಿಯಲ್ಲಿ ಜೋಳ, ಹೆಸರು, ಕಡಲೆ, ಮೆಕ್ಕೆಜೋಳ ಹಾಗೂ ಗೋಧಿ ಬೆಳೆಗೆ ಹೆಚ್ಚು ಅನುಕೂಲವಾಗಿದೆ. ತೋಟಗಾರಿಕೆ ಬೆಳೆಗಳಿಗೂ ಸಹಾಯಕವಾಗಿದೆ. ಇದರಿಂದ ಫಸಲು ದ್ವಿಗುಣಗೊಂಡು, ರೈತರ ಆದಾಯವೂ ಹೆಚ್ಚಳವಾಗಲು ಕಾರಣವಾಗಿದೆ. ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತದೆ‘ ಎನ್ನುತ್ತಾರೆ ಕಲಘಟಗಿಯ ರೈತ ಪರಶುರಾಮ. 

‘ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಹುಬ್ಬಳ್ಳಿ ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಟ್ಟು 110 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಎಲ್ಲಾ ಹೊಂಡಗಳಿಗೂ ರೈತರು ತಂತಿ ಬೇಲಿ ಹಾಕಿಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಹುಬ್ಬಳ್ಳಿ ತಾಲ್ಲೂಕಿನಲ್ಲಿ 40 ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ’ ಎನ್ನುತ್ತಾರೆ ಹುಬ್ಬಳ್ಳಿ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ತೆಂಬದ.

ಫಲಾನುಭವಿ ರೈತರು ಕೃಷಿ ಹೊಂಡದ ಸುತ್ತ ಕಡ್ಡಾಯವಾಗಿ ತಂತಿ ಬೇಲಿ ತಡೆಗೋಡೆ ನಿರ್ಮಿಸಬೇಕು. ಮುನ್ನೆಚ್ಚರಿಕೆಯ ಸೂಚನಾ ಫಲಕವನ್ನೂ ಅಳವಡಿಸಬೇಕು. 
–ಮಂಜುನಾಥ ಅಂತರವಳ್ಳಿ ಜಂಟಿ ನಿರ್ದೇಶಕ ಕೃಷಿ ಇಲಾಖೆ ಧಾರವಾಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.