
ಹುಬ್ಬಳ್ಳಿ: ಗಿರವಿಯಿಟ್ಟ ಚಿನ್ನದ ಸರದ ಸಾಲಕ್ಕೆ ಸಂಬಂಧಿಸಿ ದಂಪತಿ ನಡುವೆ ಆರಂಭವಾದ ಜಗಳವು ವಿಕೋಪಕ್ಕೆ ತಿರುಗಿದಾಗ ಪತಿಯು ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಇಲ್ಲಿನ ರಾಮಲಿಂಗೇಶ್ವರ ನಗರದಲ್ಲಿ ಸೋಮವಾರ ನಡೆದಿದೆ.
ಮಾಸಬ್ಬಿ ಶಿಗ್ಗಾವಿ (27) ಮೃತ ಮಹಿಳೆ. ಎದೆ, ಕುತ್ತಿಗೆ, ಹೊಟ್ಟೆ ಭಾಗಕ್ಕೆ ಚಾಕು ಇರಿತವಾಗಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೆಎಂಸಿ–ಆರ್ಐ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹ ರವಾನಿಸಲಾಗಿದೆ. ಆರೋಪಿ ಇರ್ಫಾನ್ ಕೃತ್ಯ ಎಸಗಿ ಕೇಶ್ವಾಪುರ ಠಾಣೆಗೆ ತೆರಳಿ ಶರಣಾಗಿದ್ದಾನೆ. ಗೋಕುಲರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಸಬ್ಬಿ ಮತ್ತು ಇರ್ಫಾನ್ ಮೂಲತಃ ಕೇಶ್ವಾಪುರದ ಗಾಂಧಿವಾಡದ ನಿವಾಸಿಗಳು. ಐದು ವರ್ಷದ ಹಿಂದೆ ಅವರ ವಿವಾಹವಾಗಿದ್ದು, ನಾಲ್ಕು ವರ್ಷದ ಮಗ, ಎರಡು ವರ್ಷದ ಮಗಳು ಇದ್ದಾಳೆ. ಒಂದು ತಿಂಗಳಿನಿಂದ ಅವರು ರಾಮಲಿಂಗೇಶ್ವರ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿ ಮಹಾನಿಂಗ ನಂದಗಾವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
‘ಬೆಳಿಗ್ಗೆ 11.30ರ ವೇಳೆ ಮಾಸಬ್ಬಿ ಮತ್ತು ಇರ್ಫಾನ್ ಮಧ್ಯೆ ಜಗಳವಾಗಿದ್ದು, ಕೋಪಗೊಂಡ ಇರ್ಫಾನ್ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ತಪ್ಪಿಸಿಕೊಂಡು ಹೊರಬರುವಾಗ ಬಾಗಿಲ ಬಳಿ ಬಿದ್ದು ಮಾಸಬ್ಬಿ ಮೃತಪಟ್ಟಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚುವ ವೇಳೆ, ಅವನೇ ಪೊಲೀಸರಿಗೆ ಶರಣಾಗಿದ್ದಾನೆ’ ಎಂದು ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
‘ಫೈನಾನ್ಸ್ನಲ್ಲಿ ಬಂಗಾರದ ಸರ ಗಿರವಿ ಇಟ್ಟಿದ್ದು, ಅದನ್ನು ಬಿಡಿಸಿಕೊಳ್ಳುವ ವಿಷಯದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಸರ ಬಿಡಿಸಿಕೊಂಡು ಬರಲು, ಮಾಸಬ್ಬಿ ಅವರ ಸಹೋದರ ಬೆಳಿಗ್ಗೆ ಬಂದು ₹20 ಸಾವಿರ ಕೊಟ್ಟು ಹೋಗಿದ್ದ. ಇನ್ನಷ್ಟು ಹಣ ಬೇಕು ಎಂದಾಗ ತಂದು ಕೊಡುವುದಾಗಿ ಹೇಳಿದ್ದ. ಅಷ್ಟರ ಒಳಗೆ ಈ ಕೃತ್ಯ ನಡೆದಿದೆ. ಆರೋಪಿ ವಶದಲ್ಲಿದ್ದು, ತನಿಖೆ ನಡೆಯುತ್ತಿದೆ’ ಎಂದರು.
₹10 ಲಕ್ಷ ವಂಚನೆ: ನಗರದ ರಿಯಲ್ ಎಸ್ಟೇಟ್ ಉದ್ಯಮಿ ಅನಿಲಕುಮಾರ ಪಾಟೀಲ ಅವರಿಗೆ ಆನ್ಲೈನ್ನಲ್ಲಿ ಪರಿಚಯವಾದ ಮಹಿಳೆ, ಕ್ರೀಫ್ಟೋ ಕರೆನ್ಸಿಯಲ್ಲಿ ಟ್ರೇಡಿಂಗ್ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂದು ನಂಬಿಸಿ, ₹10.01 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾಳೆ. ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಪಿಕೆ ಫೈಲ್ ಕಳುಹಿಸಿ ವಂಚನೆ: ಧಾರವಾಡದ ಆನಂದ ಬಿ. ಅವರ ಮೊಬೈಲ್ಗೆ ಎಪಿಕೆ ಫೈಲ್ ಇರುವ ಲಿಂಕ್ ಕಳುಹಿಸಿದ ವ್ಯಕ್ತಿ, ಅವರ ಬ್ಯಾಂಕ್ ಖಾತೆಯಲ್ಲಿದ್ದ ₹5.88 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಆನಂದ ಅವರಿಗೆ ವಂಚಕ ಎಪಿಕೆ ಫೈಲ್ ಲಿಂಕ್ ಕಳುಹಿಸಿ, ಅದನ್ನು ಮೊಬೈಲ್ಗೆ ಅಳವಡಿಸಿಕೊಳ್ಳುವಂತೆ ಮಾಡಿದ್ದಾನೆ. ನಂತರ ಒಟಿಪಿಯು ಅವರ ಗಮನಕ್ಕೆ ಬರದಂತೆ ಮಾಡಿ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವ್ಯಕ್ತಿ ಸಾವು: ಹುಬ್ಬಳ್ಳಿ ತಾಲ್ಲೂಕಿನ ವರೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಬೈಕ್ ಡಿಕ್ಕಿ ಹೊಡೆದು ಸುಮಾರು 55 ವರ್ಷದ ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ.
ಬೈಕ್ ಸವಾರ ಯಲ್ಲಪ್ಪ ಅವರು ಹುಬ್ಬಳ್ಳಿಯಿಂದ ಹಾವೇರಿಗೆ ತೆರಳುತ್ತಿದ್ದಾಗ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಕೆಎಂಸಿ–ಆರ್ಐ ಆಸ್ಪತ್ರೆಗೆ ದಾಖಲಿಸುವಾಗ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.