ಹುಬ್ಬಳ್ಳಿ: ಇಲ್ಲಿಯ ಬೆಂಗೇರಿಯಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಹು–ಧಾ ಮಹಾನಗರ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ಜನಪ್ರತಿನಿಧಿಗಳು ಶನಿವಾರ ಭೇಟಿ ನೀಡಿ, ಧ್ವಜ ತಯಾರಿಸುವ ಸಿಬ್ಬಂದಿಯನ್ನು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಖಾದಿ ಗ್ರಾಮೋದ್ಯೋಗದ ಅಧ್ಯಕ್ಷ ಕೆ.ಸಿ.ಪತ್ತಾರ, ‘75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಡಿಲಿಸಿದ ಧ್ವಜ ನೀತಿ ಸಂಹಿತೆಯಿಂದ ಖಾದಿ ರಾಷ್ಟ್ರಧ್ವಜ ಉತ್ಪಾದನೆ ಕಡಿಮೆಯಾಗಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಪಾಲಿಸ್ಟರ್ ಬಟ್ಟೆಯ ಧ್ವಜಗಳೇ ಬಳಕೆಯಾಗುತ್ತಿವೆ. ಕಡಿಮೆ ದರದಲ್ಲಿ ಅವು ಲಭ್ಯವಾಗುವುದರಿಂದ, ಖಾದಿ ರಾಷ್ಟ್ರಧ್ವಜ ಖರೀದಿಸಲು ಜನರು ಮುಂದಾಗುತ್ತಿಲ್ಲ. ಇದರಿಂದ ಖಾದಿ ಗ್ರಾಮೋದ್ಯೋಗ ನಷ್ಟದ ಹಾದಿ ಹಿಡಿದಿದೆ’ ಎಂದರು.
‘ಕನಿಷ್ಠ ಪಕ್ಷ ಸರ್ಕಾರಿ ಕಚೇರಿಗಳಲ್ಲಾದರೂ ಖಾದಿ ಧ್ವಜವೇ ಹಾರಾಡುವಂತಾಗಬೇಕು. ಧ್ವಜ ನೀತಿ ಸಂಹಿತೆ ಹಾಗೂ ಖಾದಿ ಧ್ವಜ ಖರೀದಿಸುವ ಕುರಿತು ಕೇಂದ್ರ ಸರ್ಕಾರ ಸೂಕ್ರಮ ಕ್ರಮ ಕೈಗೊಂಡರೆ, ನಷ್ಟವನ್ನು ಸರಿದೂಗಿಸಬಹುದು’ ಎಂದರು.
ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಮುಂದಿನ ದಿನಗಳಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ರಾಷ್ಟ್ರಧ್ವಜ ತಯಾರಿಕಾ ಕೇಂದ್ರದಲ್ಲಿ, ಮಾರಾಟ ಮಳಿಗೆಯಲ್ಲಿ ಹಾಗೂ ಇನ್ನಿತರ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಮೇಯರ್ ಜ್ಯೋತಿ ಪಾಟೀಲ, ಶಾಸಕ ಮಹೇಶ ಟೆಂಗಿನಕಾಯಿ, ಉಪ ಮೇಯರ್ ಸಂತೋಷ ಚವ್ಹಾಣ್, ಗ್ರಾಮೋದ್ಯೋಗದ ಪ್ರಧಾನ ಕಾರ್ಯದರ್ಶಿ ಶಿವಾನಂದ ಮಠಪತಿ ಹಾಗೂ ಮುಖಂಡರಾದ ತಿಪ್ಪಣ್ಣ ಮಜ್ಜಿಗಿ, ಶಿವು ಮೆಣಸಿನಕಾಯಿ, ವಸಂತ ನಾಡಜೋಶಿ, ಬಸವರಾಜ ಗರಗ, ರಾಜು ಕಾಳೆ, ಬೀರಪ್ಪ ಖಂಡೇಕರ, ನಾರಾಯಣ ಜರತಾರಘರ, ಹನುಮಂತ ಹರಿವಾಣ, ಮಂಜುನಾಥ ಬಿಜವಾಡ, ಸುಭಾಷ ಅಂಕಲಕೋಟೆ, ರಾಜು ಕೋರ್ಯಾಣಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.