ADVERTISEMENT

ಹುಬ್ಬಳ್ಳಿ | ಕಿರಿದಾದ ರಸ್ತೆಯಲ್ಲಿ ‘ಪ್ರಗತಿ’ ಸಂಚಾರ: ರಸ್ತೆ ವಿಸ್ತರಣೆಗೆ ಆಗ್ರಹ

ಗೋವರ್ಧನ ಎಸ್‌.ಎನ್‌.
Published 14 ನವೆಂಬರ್ 2025, 4:41 IST
Last Updated 14 ನವೆಂಬರ್ 2025, 4:41 IST
72ನೇ ವಾರ್ಡ್‌ನಲ್ಲಿರುವ ಹಳೇಹುಬ್ಬಳ್ಳಿ ಮಾರುಕಟ್ಟೆ
72ನೇ ವಾರ್ಡ್‌ನಲ್ಲಿರುವ ಹಳೇಹುಬ್ಬಳ್ಳಿ ಮಾರುಕಟ್ಟೆ   

ಹುಬ್ಬಳ್ಳಿ: 1955ರಲ್ಲಿ ನಿರ್ಮಾಣವಾದ ಹಳೇಹುಬ್ಬಳ್ಳಿ ಮಾರುಕಟ್ಟೆ ವ್ಯವಸ್ಥೆ ಸುಧಾರಣೆ, ಕಿರಿದಾದ ರಸ್ತೆಗಳ ವಿಸ್ತರಣೆಯ ನಿರೀಕ್ಷೆ ಜೊತೆಗೆ ಸಿಸಿ ರಸ್ತೆ, ಒಳಚರಂಡಿ ನಿರ್ಮಾಣದಲ್ಲಿ ಬಹುತೇಕ ಪರಿಪೂರ್ಣತೆ ಸಾಧಿಸಿದೆ 72ನೇ ವಾರ್ಡ್.

ಈ ವಾರ್ಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ವಾಸವಿದ್ದಾರೆ. ವ್ಯಾಪಾರ, ಸಣ್ಣ ಪುಟ್ಟ ಕೆಲಸ ಮಾಡುವವರೇ ಅಧಿಕ. ಸ್ವಲ್ಪ ದೂರದಲ್ಲಿ ಮಾವನೂರು, ಗಿರಿಯಾಲ ಸೇರಿದಂತೆ ವಿವಿಧ ಹಳ್ಳಿಗಳಿದ್ದು, ಒಕ್ಕಲುತನ ಮಾಡುವವರೂ ಇಲ್ಲಿದ್ದಾರೆ. 

ಅಭಿವೃದ್ಧಿ ಕಾರ್ಯ:

‘ಸಂಸದರು, ಶಾಸಕರು ಹಾಗೂ ಪಾಲಿಕೆ ಸದಸ್ಯರ ಅನುದಾನದಲ್ಲಿ ಸಿ.ಸಿ ರಸ್ತೆ, ಯುಜಿಡಿ ನಿರ್ಮಾಣವನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಒಟ್ಟು ₹7 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಾಗಿವೆ. ಸದ್ಯ ₹20 ವೆಚ್ಚದಲ್ಲಿ ತೆರೆದ ಚರಂಡಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ’ ಎನ್ನುತ್ತಾರೆ ವಾರ್ಡ್‌ ಸದಸ್ಯೆ ಸುಮಿತ್ರಾ ಗುಂಜಾಳ.

ADVERTISEMENT

‘ಕಸ ವಿಲೇವಾರಿಗಾಗಿ ಬೆಳಿಗ್ಗೆ ಹಾಗೂ ಸಂಜೆ ಆಟೊ‌ ಟಿಪ್ಪರ್ ವ್ಯವಸ್ಥೆ ಮಾಡಲಾಗಿದೆ. ಎಂಟು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. 24X7 ನೀರು ಪೂರೈಕೆ ಕಾಮಗಾರಿ ಈಚೆಗೆ ಪ್ರಾರಂಭವಾಗಿದ್ದು, ಪೈಪ್‌ಲೈನ್ ಅಳವಡಿಸಲಾಗುತ್ತಿದೆ’ ಎಂದು ಹೇಳಿದರು.  

ವಾಟ್ಸ್‌ಆ್ಯಪ್‌ ಗ್ರೂಪ್‌:

‘ವಾರ್ಡ್‌ನ ಸಮಸ್ಯೆಗಳನ್ನು ತಿಳಿದು, ಪರಿಹರಿಸಲು ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಲಾಗಿದೆ. ವಾರ್ಡ್‌ನ ಪ್ರಮುಖರು, ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಒಟ್ಟು 416 ಮಂದಿ ಸದಸ್ಯರಿದ್ದಾರೆ. ವಾರ್ಡ್‌ ಪ್ರಮುಖರು ತಮ್ಮ ಏರಿಯಾದ ಸಮಸ್ಯೆ ಬಗ್ಗೆ ಫೋಟೊ ಸಹಿತ ಮಾಹಿತಿ ನೀಡುತ್ತಾರೆ. ಅಧಿಕಾರಿಗಳೇ ನೇರವಾಗಿ ಸ್ಪಂದಿಸಿ, ಸಮಸ್ಯೆ ಪರಿಹರಿಸುತ್ತಾರೆ. ಎರಡು–ಮೂರು ತಿಂಗಳಿಗೊಮ್ಮೆ ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಭೆಯನ್ನೂ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

72ನೇ ವಾರ್ಡ್ ನಕ್ಷೆ
ರಸ್ತೆ ವಿಸ್ತರಣೆ ಕುರಿತು ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಸಾಮಾನ್ಯ ಸಭೆಯಲ್ಲೂ ಪ್ರಸ್ತಾಪಿಸಲಾಗಿದ್ದು ಮುಂದಿನ ಸಭೆಯಲ್ಲಿ ಕ್ರಮವಹಿಸುವ ಭರವಸೆ ದೊರೆತಿದೆ
ಸುಮಿತ್ರಾ ಗುಂಜಾಳ, 72ನೇ ವಾರ್ಡ್‌ ಸದಸ್ಯೆ
ಸುಮಿತ್ರಾ ಗುಂಜಾಳ
ಕಿರಿದಾದ ರಸ್ತೆಯಲ್ಲೇ ದೊಡ್ಡ ದೊಡ್ಡ ಸರಕು ವಾಹನಗಳು ಓಡಾಡುತ್ತವೆ. ಸ್ವಚ್ಛತೆ ಮರೀಚಿಕೆಯಾಗಿದೆ. ವ್ಯಾಪಾರಿಗಳಿಗೆ ಮೂರು ಪಟ್ಟು ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ
ಮಂಜುನಾಥ, ಕಿರಾಣಿ ಅಂಗಡಿ ಮಾಲೀಕ
ಮಂಜುನಾಥ
ಅರ್ಜುನ್ ಜಾದವ್
ಆಸ್ಪತ್ರೆ ನಿರ್ಮಾಣಕ್ಕೆ ಶೆಡ್ ಹಾಕಿರುವುದರಿಂದ ವ್ಯಾಪಾರಕ್ಕೆ ತೊಡಕಾಗಿದೆ. ಆಸ್ಪತ್ರೆ ನಿರ್ಮಾಣ ವೇಗ ಪಡೆಯಬೇಕು. ಮಾರುಕಟ್ಟೆ ಅಭಿವೃದ್ಧಿಗೆ ಕ್ರಮವಹಿಸಬೇಕು
ಅರ್ಜುನ್ ಜಾದವ್, ಈರುಳ್ಳಿ ವ್ಯಾಪಾರಿ

ಸಮಸ್ಯೆಗಳು

  • ರಸ್ತೆ ಬದಿ ವ್ಯಾಪಾರದಿಂದ ಸಂಚಾರಕ್ಕೆ ತೊಡಕು

  • ಕಿರಿದಾದ ರಸ್ತೆಯಲ್ಲಿ ಸಂಚರಿಸದ ಬಸ್‌ಗಳು

  • ಮುಖ್ಯರಸ್ತೆಯಲ್ಲಿ ದೂಳು

  • ಗ್ರಾಹಕರಿಗೆ ಪಾರ್ಕಿಂಗ್ ಸಮಸ್ಯೆ

  • ಸಂಚಾರ ದಟ್ಟಣೆ 

  • ರಾಷ್ಟ್ರೀಕೃತ ಬ್ಯಾಂಕ್ ಇಲ್ಲ

  • ಇ– ಸ್ವತ್ತು ಸಮಸ್ಯೆ

  • ಉದ್ಯಾನ ಇಲ್ಲ

  • ಅಶುದ್ಧ ನೀರು ಪೂರೈಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.