ಹುಬ್ಬಳ್ಳಿ: ಇಲ್ಲಿಯ ಆನಂದ ನಗರ ಮುಖ್ಯ ರಸ್ತೆಯಿಂದ ಗೋಕುಲ ಮುಖ್ಯರಸ್ತೆವರೆಗಿನ ರಸ್ತೆ, ತಗ್ಗು-ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ಹೈರಾಣಾಗುತ್ತಿದ್ದಾರೆ.
ಇದು ಪ್ರಮುಖ ರಸ್ತೆಯಾಗಿದ್ದು, ಕಾರವಾರ ರಸ್ತೆ, ಸಿದ್ಧಾರೂಢ ಮಠ, ಗೋಕುಲ ಸೇರಿದಂತೆ ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವುದರಿಂದ ವಾಹನದಟ್ಟಣೆಯೂ ಹೆಚ್ಚಾಗಿರುತ್ತದೆ. ಜೊತೆಗೆ ಶಾಲೆ, ಕಾಲೇಜು, ವಾಣಿಜ್ಯ ಮಳಿಗೆಗಳು, ಆಸ್ಪತ್ರೆ, ಹೋಟೆಲ್ಗಳಿರುವುದರಿಂದ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಇದೇ ಮಾರ್ಗದಲ್ಲೇ ಡೆನಿಸನ್ಸ್ ಹೋಟೆಲ್ ಇದ್ದು, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳು, ಸಮಾವೇಶಗಳು ಆಗಾಗ ನಡೆಯುತ್ತಿರುತ್ತವೆ. ಪ್ರಮುಖ ರಾಜಕೀಯ ನಾಯಕರು ಬರುವ ಸಂದರ್ಭದಲ್ಲಿ ಮಾತ್ರ ತಾತ್ಕಾಲಿಕ ದುರಸ್ತಿ ಮಾಡುತ್ತಾರೆ. ಎರಡು-ಮೂರು ದಿನದ ನಂತರ ಮತ್ತೆ ರಸ್ತೆ ಹಾಳಾಗುತ್ತದೆ ಎನ್ನುವುದು ಇಲ್ಲಿನ ಜನರ ದೂರು.
ಆನಂದನಗರ ಮುಖ್ಯರಸ್ತೆಯಿಂದ ಆರ್.ಎನ್.ಶೆಟ್ಟಿ ಫ್ಯಾಕ್ಟರಿವರೆಗಿನ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ₹7ಕೋಟಿ ವೆಚ್ಚದಲ್ಲಿ 1.9ಕಿ.ಮೀ ರಸ್ತೆೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಆದರೆ ಇದರ ಮುಂದಿನ ರಸ್ತೆ, ಅಕ್ಷಯ ಪಾರ್ಕ್ನ ಗ್ರೀನ್ಫೀಲ್ಡ್ ರಿಟೀಲ್ ಶಾಪ್ನಿಂದ ಹಿಡಿದು ಪೆಟ್ರೋಲ್ ಬಂಕ್ವರೆಗಿನ ರಸ್ತೆ ಹಾಳಾಗಿದ್ದು, ಹುಬ್ಬಳ್ಳಿ-ಧಾರವಾಡ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಬೇಕಿದೆ.
‘ರಸ್ತೆ ಹಾಳಾಗಿ ಕೆಲ ವರ್ಷಗಳಾಗಿದೆ, ಶಾಶ್ವತ ದುರಸ್ತಿ ಕೈಗೊಳ್ಳುತ್ತಿಲ್ಲ. ಬೀದಿದೀಪಗಳು ಉರಿಯುವುದಿಲ್ಲ. ರಾತ್ರಿ ಹೊತ್ತು ವಾಹನ ಸವಾರರು ಬಿದ್ದು, ಗಾಯಗೊಂಡಿದ್ದಾರೆ, ಹಿರಿಯ ನಾಗರಿಕರು ನಿಯಂತ್ರಣ ತಪ್ಪಿ, ಎಡವುತ್ತಾರೆ. ಆಗಾಗ ಅಪಘಾತಗಳು ಸಂಭವಿಸುತ್ತವೆ. ಬೀದಿ ದೀಪಗಳನ್ನು ದುರಸ್ತಿ ಮಾಡದಿರುವುದರಿಂದ ರಾತ್ರಿಪೂರ್ತಿ ನಮ್ಮ ಅಂಗಡಿ ಮುಂಭಾಗದಲ್ಲಿ ದೀಪ ಹಚ್ಚಿರುತ್ತೇವೆ’ ಎಂದು ಮಳಿಗೆಯೊಂದರ ವ್ಯವಸ್ಥಾಪಕ ರಘುವೀರ ಪ್ರಭು ತಿಳಿಸಿದರು.
‘ಇಲ್ಲಿಯ ಜೈಂಟ್ಸ್ ಶಾಲೆ ಮಕ್ಕಳನ್ನು ಆಟೊದಲ್ಲಿ ಬಿಡುತ್ತೇನೆ. ರಸ್ತೆ ತುಂಬ ಗುಂಡಿಗಳಿರುವುದರಿಂದ ಕೆಲವೊಮ್ಮೆ ನಿಯಂತ್ರಣ ತಪ್ಪುತ್ತದೆ. ಆಟೊದಲ್ಲಿ ಕುಳಿತುಕೊಳ್ಳುವ ಮಕ್ಕಳು ತಲೆ ಬಡಿಸಿಕೊಳ್ಳುತ್ತಾರೆ. ವಾಹನವೂ ಹಾಳಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಶೀಘ್ರ ರಸ್ತೆ ದುರಸ್ತಿಗೊಳಿಸಬೇಕು. ಗರ್ಭಿಣಿಯರನ್ನು ಈ ರಸ್ತೆಯಲ್ಲಿ ಕರೆದುಕೊಂಡು ಹೋಗುವುದು ಸವಾಲಿನ ಕೆಲಸ’ ಎಂದು ಆಟೊ ಚಾಲಕ ಕಿರಣ ಬೇಸರ ವ್ಯಕ್ತಪಡಿಸಿದರು.
‘ಪ್ರಮುಖ ರಸ್ತೆಯಾಗಿದ್ದು, ವಾಹನಗಳ ಸಂಖ್ಯೆ ಹೆಚ್ಚಾಗಿರುತ್ತದೆ. ದುರಸ್ತಿ ಮಾಡುವಂತೆ ಸಂಬಂಧಿಸಿದವರಿಗೆ ಮನವಿ ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಬಸವರಾಜ ನಡುವಿನಕೇರಿ ತಿಳಿಸಿದರು.
‘ರಾಜಕೀಯ ನಾಯಕರು ಬರುವಾಗ ಮಾತ್ರ ತಾತ್ಕಾಲಿಕವಾಗಿ ದುರಸ್ತಿ ಮಾಡುತ್ತಾರೆ. ಆದರೆ ವಾರದೊಳಗೆ ಮತ್ತೆ ಮೊದಲಿನಂತಾಗುತ್ತದೆ. ಸಣ್ಣ ಮಳೆಗೆ ರಸ್ತೆ ಸಂಪೂರ್ಣ ಕೆಸರುಮಯವಾಗಿ ಗ್ರಾಹಕರು ಬರಲು ಹಿಂದೇಟು ಹಾಕುತ್ತಾರೆ’ ಎಂದು ಸ್ಥಳೀಯ ಮಳಿಗೆಯೊಂದರಲ್ಲಿ ಕೆಲಸ ಮಾಡುವ ಬಸವರಾಜ ಸಂಗಾವಿ ತಿಳಿಸಿದರು.
₹ 4ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಮಳೆಗಾಲದ ನಂತರ ರಸ್ತೆ ದುರಸ್ತಿಗೆ ಕಾಮಗಾರಿ ಕೈಗೊಳ್ಳಲಾಗುವುದುವಿಜಯಕುಮಾರ್ ಆರ್ ಪಾಲಿಕೆ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.