ಹುಬ್ಬಳ್ಳಿ: ರೈಲು ಹಳಿಗಳ ಮೇಲೆ ಚಾರಣ ಮಾಡುತ್ತ ದೂಧ್ ಸಾಗರ ಜಲಪಾತ ಸ್ಥಳಕ್ಕೆ ತೆರಳುತ್ತಿದ್ದ 21 ಮಂದಿ ಪ್ರವಾಸಿಗರನ್ನು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ಸೋಮವಾರ ವಶಕ್ಕೆ ಪಡೆದಿದ್ದು, ಈ ಬಗ್ಗೆ ಕ್ಯಾಸಲ್ರಾಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಶವಂತಪುರ–ವಾಸ್ಕೊ ಡ ಗಾಮ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಿಂದ ಬಂದ ಪ್ರವಾಸಿಗರು, ಕ್ಯಾಸಲ್ರಾಕ್ ನಿಲ್ದಾಣದಲ್ಲಿ ಇಳಿದು, ದೂಧ್ ಸಾಗರ ಜಲಪಾತ ವೀಕ್ಷಣೆಗೆ ತೆರಳುತ್ತಿದ್ದರು. ಸುರಂಗಗಳು, ಕಡಿದಾದ ಕಂದಕಗಳು, ಕಾಡು ಪ್ರಾಣಿಗಳು ಹಾಗೂ ಗುಡ್ಡ ಕುಸಿಯುವ ಅಪಾಯದ ಸ್ಥಳಗಳು ಅಲ್ಲಿರುವುದರಿಂದ, ಮಳೆಗಾಲದ ಅವಧಿಯಲ್ಲಿ ಜಲಪಾತ ಸ್ಥಳಕ್ಕೆ ತೆರಳುವುದನ್ನು ನಿಷೇಧಿಸಲಾಗಿದೆ. ಖಚಿತ ಮಾಹಿತಿ ಆಧರಿಸಿ ಆರ್ಪಿಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದ ಪ್ರವಾಸಿಗರನ್ನು ವಶಕ್ಕೆ ಪಡೆದಿದ್ದಾರೆ.
ಈ ಭಾಗದಲ್ಲಿ ಈ ಹಿಂದೆ ಹಲವು ದುರಂತಗಳು ಸಂಭವಿಸಿ, ಜೀವಹಾನಿಯಾಗಿವೆ. ದೂಧ್ ಸಾಗರ್ ಜಲಪಾತ ತಲುಪಲು ರೈಲ್ವೆ ಹಳಿಗಳ ಮೇಲೆ ಚಾರಣ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಬಂಧಿತ ಪ್ರವಾಸಿಗರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದು ನೈರುತ್ಯ ರೇಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.