ADVERTISEMENT

ಹುಬ್ಬಳ್ಳಿ: ತೊಡಕಿನ ನಡುವೆ ಪ್ರಗತಿಯತ್ತ ಹೆಜ್ಜೆ

ಸ್ವಚ್ಛತೆ, ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಸಿಗಬೇಕಿದೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 6:33 IST
Last Updated 31 ಅಕ್ಟೋಬರ್ 2025, 6:33 IST
ಹುಬ್ಬಳ್ಳಿಯ 71ನೇ ವಾರ್ಡ್‌ನಲ್ಲಿ ಸಿಸಿ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ
ಹುಬ್ಬಳ್ಳಿಯ 71ನೇ ವಾರ್ಡ್‌ನಲ್ಲಿ ಸಿಸಿ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ   

ಹುಬ್ಬಳ್ಳಿ: ನಗರದ ಪುಣೆ–ಬೆಂಗಳೂರು ಮುಖ್ಯರಸ್ತೆ ಪಕ್ಕದಿಂದಲೇ ಇರುವ ವಾರ್ಡ್‌ ಸಂಖ್ಯೆ 71, ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತಿದೆ. ಹಲವು ತೊಡಕುಗಳ ನಡುವೆಯೂ ಮೂಲಸೌಕರ್ಯ ಕಲ್ಪಿಸುವ ಕಾರ್ಯ ನಡೆದಿದೆ.

ಈ ಮೊದಲು 59ನೇ ವಾರ್ಡ್‌ ವ್ಯಾಪ್ತಿಯಲ್ಲಿದ್ದ ಇಲ್ಲಿನ ಬಡಾವಣೆಗಳನ್ನು ಹೊಸ ವಾರ್ಡ್‌ ರಚನೆ ಸಮಯದಲ್ಲಿ 71ನೇ ವಾರ್ಡ್‌ಗೆ ಸೇರ್ಪಡೆ ಮಾಡಲಾಗಿದೆ. ನ್ಯೂ ಇಂಗ್ಲಿಷ್‌ ಸ್ಕೂಲ್‌ನಿಂದ ಆರಂಭವಾಗಿ ಸದರ್‌ಸೋಫಾ ಮುಖ್ಯರಸ್ತೆವರೆಗೆ 0.24 ಚದರ ಕಿ.ಮೀ.ವರೆಗೆ ವಾರ್ಡ್‌ ವ್ಯಾಪಿಸಿದೆ. 

ಏಳುಮಕ್ಕಳ ತಾಯಿ ಹಾಗೂ ಬನ್ನಿಮಕ್ಕಳ ತಾಯಿ ದೇವಸ್ಥಾನಗಳಿದ್ದು, ಫರ್ದಾನಕಲ್‌ ಹಾಗೂ ಸದರ್‌ಸೋಫಾದಲ್ಲಿ ಮಸೀದಿಗಳಿವೆ. ಹಜರತ್‌ ತುರ್ಬಾನ್‌ ಶಾವಲ್ಲಿ ದರ್ಗಾವೂ ಇಲ್ಲಿದೆ. ಬಹುತೇಕ ಮುಸ್ಲಿಂ ಸಮುದಾಯದವರು ಈ ವಾರ್ಡ್‌ನಲ್ಲಿದ್ದು, ಸಣ್ಣ ಪುಟ್ಟ ವ್ಯಾಪಾರ ಸೇರಿದಂತೆ ವಿವಿಧ ಕೆಲಸಗಳನ್ನು ತೊಡಗಿದ್ದಾರೆ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಸೇರಿದ ಒಟ್ಟು ಮೂರು ವಾಣಿಜ್ಯ ಕಟ್ಟಡಗಳಿವೆ.

ADVERTISEMENT

‘ಲ್ಯಾಂಡ್‌ ಆರ್ಮಿ, ಲೋಕೋಪಯೋಗಿ ಇಲಾಖೆ, ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಒಟ್ಟು ₹7 ಕೋಟಿ ಅನುದಾನದಲ್ಲಿ ವಿವಿಧೆಡೆ ರಸ್ತೆ, ಚರಂಡಿ, ಯುಜಿಡಿ ನಿರ್ಮಾಣ ಮಾಡಲಾಗಿದೆ. ಸದ್ಯ ₹2.50 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಪಾಲಿಕೆ ಸದಸ್ಯ ನಸೀರ್‌ ಅಹ್ಮದ್‌ ಮೆಹಬೂಬ್‌ಸಾಬ್‌ ಹೊನ್ಯಾಳ್‌ ತಿಳಿಸಿದರು.

‘ಕೊಳೆಗೇರಿ ಪ್ರದೇಶವಾದ ಕೋಳೇಕೇರಿ ಪ್ಲಾಟ್‌ನಲ್ಲಿ ಬಹುತೇಕರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಶೇ 20ರಷ್ಟು ನಿವಾಸಿಗಳಿಗೆ ವಸತಿ ವ್ಯವಸ್ಥೆ ಆಗಬೇಕಿದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ತೆರೆದ ಚರಂಡಿ ಮೇಲೆ ಸಿಮೆಂಟ್‌ ಮುಚ್ಚಳ ಹಾಕಲಾಗುತ್ತಿದೆ. ಜನರಿಗೆ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ’ ಎಂದರು.

‘ಒಟ್ಟು 52 ಸಿಸಿಟಿವಿ ಕ್ಯಾಮೆರಾಗಳನ್ನು ಪ್ರಮುಖ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಈಚೆಗೆ ಹೊಸದಾಗಿ 100 ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಕೆಲವೆಡೆ 24X7 ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸದ್ಯ 7ರಿಂದ 9 ದಿನಕ್ಕೊಮ್ಮೆ ಪಾಲಿಕೆಯಿಂದ ನೀರು ಪೂರೈಕೆ ಆಗುತ್ತಿದೆ. ನಮ್ಮ ಕ್ಲಿನಿಕ್‌ ಇದ್ದು, ಸಾಮಾನ್ಯ ಚಿಕಿತ್ಸೆ ದೊರೆಯುತ್ತಿದೆ’ ಎಂದು ತಿಳಿಸಿದರು.

‘ರಾಜಕಾಲುವೆಯಲ್ಲಿ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹಗೊಳ್ಳುವುದರಿಂದ ಕುಡಿಯುವ ನೀರಿನ ಪೈಪ್‌ಗೆ ಕೊಳಚೆ ನೀರು ಸೇರುತ್ತದೆ. ಮಳೆ ಬಂದಾಗ ರಾಜಕಾಲುವೆ ತುಂಬಿ, ಕೊಳಚೆ ನೀರು ಸುತ್ತಲಿನ ಸುಮಾರು 250 ಮನೆಗೆಳಿಗೆ ನುಗ್ಗುತ್ತದೆ. ಇದರಿಂದ ನಷ್ಟಕ್ಕೀಡಾದವರಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ’ ಎನ್ನುತ್ತಾರೆ ವಾರ್ಡ್‌ ನಿವಾಸಿಗಳು.  

ವಾರ್ಡ್‌ ಸಮಸ್ಯೆ ಪರಿಹರಿಸುವಂತೆ ಪ್ರತಿ ಬಾರಿ ಪಾಲಿಕೆಯಲ್ಲಿ ಧ್ವನಿ ಎತ್ತುತ್ತಿದ್ದೇನೆ. ಹಂತ ಹಂತವಾಗಿ ವಾರ್ಡ್‌ ಅಭಿವೃದ್ಧಿ ಮಾಡಲಾಗುತ್ತಿದೆ
ನಸೀರ್‌ ಅಹ್ಮದ್‌ ಮೆಹಬೂಬ್‌ಸಾಬ್‌ ಹೊನ್ಯಾಳ್‌ ಪಾಲಿಕೆ ಸದಸ್ಯ 71ನೇ ವಾರ್ಡ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.