ADVERTISEMENT

ಅಂಚೆ ಲಕೋಟೆಯಲ್ಲಿ ಶಿವಕುಮಾರ ಸ್ವಾಮೀಜಿ ಚಿತ್ತಾರ ಮೂಡಿಸಿದ ಲಿಂಗಂ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 11:33 IST
Last Updated 24 ಫೆಬ್ರುವರಿ 2020, 11:33 IST
ಅಂಚೆ ಇಲಾಖೆ ಹೊರತಂದಿರುವ ಶಿವಕುಮಾರ ಸ್ವಾಮೀಜಿ ಪೇಟಿಂಗ್‌ ಇರುವ ವಿಶೇಷ ಲಕೋಟೆ
ಅಂಚೆ ಇಲಾಖೆ ಹೊರತಂದಿರುವ ಶಿವಕುಮಾರ ಸ್ವಾಮೀಜಿ ಪೇಟಿಂಗ್‌ ಇರುವ ವಿಶೇಷ ಲಕೋಟೆ   

ಹುಬ್ಬಳ್ಳಿ: ಅಂಚೆ ಇಲಾಖೆಯು ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ ಸ್ಮರಣಾರ್ಥವಾಗಿ, ಕುಂಚದಲ್ಲಿ ಮೂಡಿದ ಪೇಂಟಿಂಗ್ ಒಳಗೊಂಡ ವಿಶೇಷ ಲಕೋಟೆ ಹಾಗೂ ಮುದ್ರೆಯನ್ನು (ಸೀಲ್‌) ಬಿಡುಗಡೆ ತುಮಕೂರಿನಲ್ಲಿ ಭಾನುವಾರ ಬಿಡುಗಡೆ ಮಾಡಲಾಗಿದೆ.

ವಿಶೇಷವೆಂದರೆ, ಲಕೋಟೆ ಮೇಲೆ ಮೂಡಿರುವ ಪೇಂಟಿಂಗ್ ಬಿಡಿಸಿದವರು ಹುಬ್ಬಳ್ಳಿಯ ಕೇಶ್ವಾಪುರದ ಕಲಾವಿದ ಸತೀಶಕುಮಾರ್ ಲಿಂಗಂ. ಮೊದಲ ಬಾರಿಗೆ ಇಂತಹ ಲಕೋಟೆ ಪರಿಚಯಿಸಿರುವ ಅಂಚೆ ಇಲಾಖೆ, ಅದರ ಹಿಂಭಾಗ ಕಲಾವಿದ ಲಿಂಗಂ ಅವರ ಹೆಸರನ್ನು ನಮೂದಿಸಿದೆ.

ಖ್ಯಾತ ಕಲಾವಿದ ಬಿ.ಪಿ. ಲಿಂಗಂ ಅವರ ಮಗನಾದ ಸತೀಶಕುಮಾರ್ ಅವರು, ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್. ವಿದೇಶದಲ್ಲಿ ಅವರ ವಾಸ. ಆದರೂ, ತಂದೆಯಿಂದ ಬಳುವಳಿಯಾಗಿ ಸಿಕ್ಕ ಪೇಂಟಿಂಗ್ ಅವರ ಮುಖ್ಯ ಹವ್ಯಾಸ.

ADVERTISEMENT

‘ಹುಬ್ಬಳ್ಳಿಯ ಮಹಾವೀರ್ ಎಂಬುವರಿಗಾಗಿ ಕೆಲ ತಿಂಗಳ ಹಿಂದೆ ಶಿವಕುಮಾರ ಸ್ವಾಮೀಜಿಯ ಪೇಂಟಿಂಗ್ ಮಾಡಿದ್ದೆ. ಅವರಿಗೆ ಪರಿಚಯವಿರುವ ಅಂಚೆ ಇಲಾಖೆಯ ಅಧಿಕಾರಿ ಅದನ್ನು ಅಂಚೆ ಇಲಾಖೆ ಹೊರತರಲು ಉದ್ದೇಶಿಸಿದ್ದ ವಿಶೇಷ ಲಕೋಟೆಗೆ ಬಳಸಲು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ಬಳಿಕ, ನನ್ನನ್ನು ಸಂಪರ್ಕಿಸಿದಾಗ, ಸ್ವಾಮೀಜಿಯ ಜಲವರ್ಣದ ಪೇಂಟಿಂಗ್ ಬಿಡಿಸಿ ಕೊಟ್ಟೆ. ಮೂರು ತಿಂಗಳ ಬಳಿಕ, ಇಲಾಖೆಯ ಅನುಮೋದನೆ ಪಡೆದ ಪೇಟಿಂಗ್ ಕಡೆಗೂ ವಿಶೇಷ ಲಕೋಟೆ ಮೇಲೆ ಮುದ್ರಿತವಾಯಿತು. ಮೊದಲ ಬಾರಿಗೆ ಕಲಾವಿದರ ಹೆಸರನ್ನು ಲಕೋಟೆ ಮೇಲೆ ಮುದ್ರಿಸಿದ್ದಾರೆ. ಇದು ನನ್ನ ಕೆಲಸಕ್ಕೆ ದೊಡ್ಡ ಗೌರವ’ ಎಂದು ಸತೀಶಕುಮಾರ್ ಲಿಂಗಂ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.