ಹುಬ್ಬಳ್ಳಿ: ಅಣ್ಣ–ತಂಗಿಯರ ಬಾಂಧವ್ಯದ ಪ್ರತೀಕವಾದ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.ನೆಚ್ಚಿನ ಸಹೋದರರಿಗೆ ಸಹೋದರಿಯರು ಬಣ್ಣ ಬಣ್ಣದ ರಾಖಿಗಳನ್ನು ಕಟ್ಟಿ ಸಂಭ್ರಮಿಸಿದರು. ನಂತರ, ಸಿಹಿಯನ್ನು ತಿನ್ನಿಸಿದರು. ಸಹೋದರಿ ಪ್ರೀತಿಯಿಂದ ಕಟ್ಟಿದ ರಾಖಿಗೆ ಪ್ರತಿಯಾಗಿ ಅಣ್ಣ–ತಮ್ಮಂದಿರು ವಿಶೇಷ ಉಡುಗೊರೆ ನೀಡಿದರು.
ಹೆಣ್ಣು ಮಕ್ಕಳು ಪ್ರತಿವರ್ಷ ನೂಲು ಹುಣ್ಣಿಮೆಯಂದು ತವರಿಗೆ ಬರುತ್ತಾರೆ. ಅಂದು ಪೂಜೆ ನೆರವೇರಿಸಿ, ಅಣ್ಣ– ತಮ್ಮಂದಿರ ಬಲಗೈಗೆ ರಾಖಿಯನ್ನು ಕಟ್ಟಿ ಆರತಿ ಬೆಳಗುತ್ತಾರೆ. ಗ್ರಾಮೀಣ ಭಾಗದಲ್ಲಿ ಕಟ್ಟಿಗೆ ಮಣೆಯ ಮೇಲೆ ಸಹೋದರರನ್ನು ಕೂರಿಸುವ ಹೆಣ್ಣು ಮಕ್ಕಳು, ಅವರ ಹಣೆ ತೊಳೆದು ಕುಂಕುಮದ ತಿಲಕವನ್ನು ಹಚ್ಚುತ್ತಾರೆ. ಕಷ್ಟದಲ್ಲಿನಮ್ಮನ್ನು ಪೊರೆಯುತ್ತಾ ಬಂದ ಸಹೋದರರ ಬದುಕು ಸುಖವಾಗಿರಲಿ ಎಂದು ಹರಸಿ, ಅವರಿಗೆ ಸಿಹಿಯನ್ನು ತಿನ್ನಿಸುತ್ತಾರೆ.ಚಿಣ್ಣರಿಂದಿಡಿದು ದೊಡ್ಡವರವರೆಗೆ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.
ಸಸಿಗಳಿಗೂ ರಾಖಿ ಕಟ್ಟಿದರು:ತಾಲ್ಲೂಕಿನಲ್ಲಿ ಕುಸಗಲ್ಲ ಸರ್ಕಾರಿ ಪ್ರೌಢಶಾಲೆಯ ಡಾ. ಸಲೀಂ ಅಲಿ ಇಕೋ ಕ್ಲಬ್ ವತಿಯಿಂದ ‘ಸಸ್ಯಸಂಕುಲ ಉಳಿಸಿ ಅಭಿಯಾನ’ದಡಿ ಮಕ್ಕಳು ರಕ್ಷಾ ಬಂಧನದಂದು ಸಸಿಗಳಿಗೆ ರಾಖಿ ಕಟ್ಟಿ ಗಮನ ಸೆಳೆದರು.
ಕ್ಲಬ್ ಸಂಯೋಜಕ ಸಂಜೀವಕುಮಾರ ಭೂಶೆಟ್ಟಿ ಮಾರ್ಗದರ್ಶನದಲ್ಲಿ ಕಾರ್ಯದರ್ಶಿ ಮಧು ಅನಾಡದ ನೇತೃತ್ವದಲ್ಲಿ ರೇಣುಕಾ ಹುಜರತಿ, ಮಧು ಬದನಿಕಾಯಿ, ತನು ಅನಾಡದ, ಅನುಶ್ರೀ, ರಾಜು ಹಾಗೂ ವೈಷ್ಣವಿ ಗ್ರಾಮದ ಸಸಿಗಳಿಗೆ ರಾಖಿ ಕಟ್ಟಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.