ಹುಬ್ಬಳ್ಳಿ: ಮಳೆಯಿಂದಾಗಿ ಭಾರೀ ತಗ್ಗು-ಗುಂಡಿಗಳಿಂದ ತೀರಾ ಹದಗೆಟ್ಟಿರುವ ನಗರದ ತಿಮ್ಮಸಾಗರ ಗುಡಿ ರಸ್ತೆಗೆ ಮೇಯರ್ ಈರೇಶ ಅಂಚಟಗೇರಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಈಗಾಗಲೇ ಟೆಂಡರ್ ಆಗಿರುವ ಸಿಮೆಂಟ್ ರಸ್ತೆ ಕಾಮಗಾರಿಯನ್ನು ಆರಂಭಿಸುವಂತೆ ಸೂಚಿಸಿದರು.
ಹಳೇ ಪಿ.ಬಿ. ರಸ್ತೆಯಿಂದ ಹೊಸೂರಿನ ನೂತನ ನ್ಯಾಯಾಲಯ ಸಂಕೀರ್ಣವನ್ನು ಸಂಪರ್ಕಿಸುವ ಈ ರಸ್ತೆಯ ಅವ್ಯವಸ್ಥೆ ಕುರಿತು "ಪ್ರಜಾವಾಣಿ"ಯಲ್ಲಿ "ಕೋರ್ಟ್ ರಸ್ತೆಗೆ ನ್ಯಾಯ ಕೊಡಿಸಿ" ಶೀರ್ಷಿಕೆಯಡಿ ಇಂದು ವಿಶೇಷ ವರದಿ ಪ್ರಕಟವಾಗಿತ್ತು. ಅದರ ಬೆನ್ನಲ್ಲೇ ಮೇಯರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
"₹40 ಲಕ್ಷ ವೆಚ್ಚದಲ್ಲಿ ತಿಮ್ಮಸಾಗರ ಗುಡಿಯಿಂದ ಕೋರ್ಟ್ ಸಂಕೀರ್ಣದವರೆಗೆ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಆಗಿದೆ. ಮಳೆ ಕಾರಣಕ್ಕೆ ಕಾಮಗಾರಿ ಆರಂಭವಾಗಿರಲಿಲ್ಲ. ಇದೀಗ, ಪಾಲಿಕೆಯ ಸ್ಥಳೀಯ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ, ತಕ್ಷಣ ಕಾಮಗಾರಿ ಆರಂಭಿಸಲು ಸೂಚಿಸಿದ್ದೇನೆ" ಎಂದು ಈರೇಶ ಅಂಚಟಗೇರಿ ಹೇಳಿದರು.
"ಶಾಸಕರ ₹20 ಲಕ್ಷ ಅನುದಾನ ಮತ್ತು ಮಹಾನಗರ ಪಾಲಿಕೆಯ ₹20 ಲಕ್ಷ ಅನುದಾನದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕೆಲಸದ ಸಂದರ್ಭದಲ್ಲಿ ರಸ್ತೆಯನ್ನು ಬಂದ್ ಮಾಡಿ, ಪಕ್ಕದ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು" ಎಂದು ಸ್ಥಳೀಯ ಪಾಲಿಕೆ ಸದಸ್ಯ ಕಿಶನ್ ಬೆಳಗಾವಿ ತಿಳಿಸಿದರು.
ಪಾಲಿಕೆಯ ವಲಯ ಕಚೇರಿ- 5ರ ಸಹಾಯಕ ಆಯುಕ್ತ ಶಂಕರ ಪಾಟೀಲ, ಎಂಜಿನಿಯರ್ ಕೆಂಭಾವಿ ಹಾಗೂ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.