ADVERTISEMENT

ಹುಬ್ಬಳ್ಳಿ: ಈದ್ಗಾದಲ್ಲಿ ಮೂರು ದಿನ ಗಣೇಶೋತ್ಸವಕ್ಕೆ ಅನುಮತಿ

ಮೇಯರ್‌ ಈರೇಶ ಅಂಚಟಗೇರಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 20:07 IST
Last Updated 29 ಆಗಸ್ಟ್ 2022, 20:07 IST

ಹುಬ್ಬಳ್ಳಿ: ‘ಪ್ರಸ್ತುತ ವರ್ಷದಿಂದ ನಗರದ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಲಾಗುವುದು’ ಎಂದು ಮೇಯರ್ ಈರೇಶ ಅಂಚಟಗೇರಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಾಲಿಕೆ ಸಾಮಾನ್ಯ ಸಭೆಯ ಸದನ ಸಮಿತಿ ವರದಿ ಅನ್ವಯ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಪಾಲಿಕೆಗೆ ಆರು ಸಂಘಟನೆಗಳು ಮನವಿ ಸಲ್ಲಿಸಿದ್ದು, ಅವುಗಳಲ್ಲಿ ಒಂದು ಸಂಘಟನೆಗೆ ಮಾತ್ರ ಅವಕಾಶ ನೀಡಲಾಗುವುದು. ಪ್ರಸ್ತುತ ವರ್ಷ ಮೂರು ದಿನಗಳವರೆಗೆ ಮಾತ್ರ ಉತ್ಸವಕ್ಕೆ ಅವಕಾಶ ನೀಡಲಾಗಿದೆ. ಮುಂಬರುವ ವರ್ಷಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಎಷ್ಟು ದಿನ ಎಂದು ನಿರ್ಧರಿಸಲಾಗುವುದು’ ಎಂದರು.

‘ಆರು ಸಂಘಟನೆಗಳಲ್ಲಿ ಯಾವ ಸಂಘಟನೆಗೆ ಗಣೇಶ ಪ್ರತಿಷ್ಠಾಪಿಸಲು ಅವಕಾಶ ನೀಡಬೇಕು ಎನ್ನುವುದು ಮೇಯರ್ ವಿವೇಚನೆಗೆ ಬಿಡಲಾಗಿದೆ. ಮಂಗಳವಾರ ಬೆಳಿಗ್ಗೆ ಸದನ ಸಮಿತಿ ಸದಸ್ಯರ ಜೊತೆ ಚರ್ಚಿಸಿ ಒಂದು ಸಂಘಟನೆ ಹೆಸರು ಅಂತಿಮ ಮಾಡಲಾಗುವುದು. ಅನುಮತಿಗೆ ಅರ್ಜಿ ಸಲ್ಲಿಸಿದ್ದ ಉಳಿದ ಐದು ಸಂಘಟನೆಗಳು ಅವರಿಗೆ ಸಹಕರಿಸಬೇಕು’ ಎಂದು ವಿನಂತಿಸಿದರು.

ADVERTISEMENT

‘ಉಳಿದ ಗಣೇಶೋತ್ಸವ ಸಮಿತಿಗೆ ಇರುವ ನಿಯಮಾವಳಿಗಳೇ, ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸುವ ಗಣೇಶೋತ್ಸವ ಸಮಿತಿಗೂ ಅನ್ವಯವಾಗಲಿದೆ. ಮೈದಾನದಲ್ಲಿರುವ ಧ್ವಜಕಟ್ಟೆ ಮತ್ತು ಕಟ್ಟಡಕ್ಕೆ ಯಾವುದೇ ಸಮಸ್ಯೆಯಾಗದಂತೆ ಪ್ರತಿಷ್ಠಾಪನೆ ಮಾಡಬಹುದು. ಉತ್ಸವ ಹೇಗೆ ಆಚರಿಸಬೇಕೆನ್ನುವುದು ಸಮಿತಿಗೆ ಬಿಟ್ಟ ವಿಚಾರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.