ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದ ರಸ್ತೆ ದುರಸ್ತಿಗೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಕೊಪ್ಪಿಕರ ರಸ್ತೆಯಲ್ಲಿ ಗಣಹೋಮ ನಡೆಸಿ ವಿಭಿನ್ನವಾಗಿ ಪ್ರತಿಭಟಿಸಿದರು.
ಗುಂಡಿ ಬಿದ್ದ ರಸ್ತೆಯಲ್ಲಿ ರಂಗೋಲಿ ಬಿಡಿಸಿ, ಹೂ ಮಾಲೆ ಹಾಕಿ ಸಿಂಗರಿಸಿದ್ದರು.
ಹುಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ತಾಫ್ ಹಳ್ಳೂರ ಮಾತನಾಡಿ, ಅವಳಿ ನಗರದಲ್ಲಿನ ಬಹುತೇಕ ರಸ್ತೆಗಳ ಕಾಮಗಾರಿ ಆರಂಭವಾಗಿ ವರ್ಷ ಸಮೀಪಿಸುತ್ತಿವೆ. ಅರ್ಧಮರ್ಧ ಕಾಮಗಾರಿ ಹಾಗೂ ರಸ್ತೆಯಲ್ಲಿ ಗುಂಡಿ ಬಿದ್ದ ಪರಿಣಾಮ ವಾಹನ ಸವಾರರು ತೀವ್ರ ಪರದಾಡುವಂತಾಗಿದೆ. ಬಿಜೆಪಿ ಮುಖಂಡರ ಸಂಬಂಧಿಕರ ಮದುವೆ, ಕಾರ್ಯಕ್ರಮವಿದ್ದರೆ ಮಾತ್ರ ಅಲ್ಲಲ್ಲಿ ರಸ್ತೆ ದುರಸ್ತಿಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ಅವಳಿನಗರದ ರಸ್ತೆ ದುರಸ್ತಿಗಾಗಿ ಎರಡು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಸಾರ್ವಜನಿಕರು ಸಹ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ರಸ್ತೆ ದುರಸ್ತಿ ಮಾಡುವ ಬುದ್ಧಿ ಸರ್ಕಾರಕ್ಕೆ ಭಗವಂತ ದಯಪಾಲಿಸಲಿ ಎಂದು, ನಾವು ಗಣಹೋಮ ಮಾಡಿದ್ದೇವೆ ಎಂದರು.
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ಪ್ರಮುಖ ಪದಾಧಿಕಾರಿಗಳು ಇದ್ದಾರೆ. ಜೋಶಿ, ಶೆಟ್ಟರ್ 25 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿ ಇದ್ದಾರೆ. ಆದರೂ ಅವರಿಂದ ರಸ್ತೆ ಸರಿಪಡಿಸಲು ಸಾಧ್ಯವಾಗಿಲ್ಲ. ಕೂಡಲೇ ಗುಂಡಿ ಹಾಗೂ ದೂಳು ಮುಕ್ತ ನಗರವಾಗಬೇಕು ಎಂದು ಆಗ್ರಹಿಸಿದರು.
ಇಕ್ಬಾಲ್ ನವಲೂರ, ಸುವರ್ಣಾ ಕಲ್ಲಕುಂಟ್ಲ, ಬಸವರಾಜ ಕಿತ್ತೂರ, ರಫಿಕ್ ದರ್ಗಾದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.