ಹುಬ್ಬಳ್ಳಿ: ಬಕ್ರೀದ್ ಹಬ್ಬದ ದಿನ ಈದ್ಗಾ ಮೈದಾನದಲ್ಲಿ ನಡೆಯುವ ವಿಶೇಷ ಪ್ರಾರ್ಥನೆಯಲ್ಲಿ ಸಾವಿರಾರು ಮಂದಿ ಭಾಗವಹಿಸುವುದರಿಂದ, ಸಂಭಾವ್ಯ ವಾಹನ ದಟ್ಟಣೆ ತಪ್ಪಿಸಲು ಬುಧವಾರ ಈ ಕೆಳಕಂಡಂತೆ ವಾಹನ ಮಾರ್ಗ ಬದಲಾವಣೆ ಮಾಡಲಾಗಿದೆ.
ಗದಗ ರೋಡ್ ಅಂಡ್ ಬ್ರಿಡ್ಜ್: ಗದಗ ಕಡೆಯಿಂದ ಮತ್ತು ರೈಲ್ವೆ ಸ್ಟೇಷನ್ ಕಡೆಯಿಂದ ಬರುವ ವಾಹನಗಳು, ಡಿಆಆರ್ಎಂ ಕಚೇರಿ ರಸ್ತೆ ಮುಖಾಂತರ ಸಾಗಿ ಶೃಂಗಾರ ಹೋಟೆಲ್ ತಿರುವು, ದೇಸಾಯಿ ತಿರುವು ಮೂಲಕ ಹೋಗಿ, ಕಾಟನ್ ಮಾರ್ಕೆಟ್ ಮೂಲಕ ಹೂಸೂರ ತಿರುವು ಸೇರಬೇಕು. ಕೆಎಸ್ಆರ್ಟಿಸಿ ಬಸ್ಸುಗಳು ಹಾಗೂ ಖಾಸಗಿ ವಾಹನಗಳಿಗೆ ಗ್ಲಾಸ್ ಹೌಸ್ ಹತ್ತಿರ ತಾತ್ಕಾಲಿಕವಾಗಿ ಬಸ್ ನಿಲ್ದಾಣದ ವ್ಯವಸ್ಥೆ ಮಾಡಲಾಗುತ್ತದೆ.
ದೇಸಾಯಿ ತಿರುವು: ನವಲಗುಂದ ಕಡೆಯಿಂದ ಬರುವ ವಾಹನಗಳು ಸರ್ಕಿಟ್ ಹೌಸ್ ಮುಂದೆ ಹಾಯ್ದು ಕಾಟನ್ ಮಾರ್ಕೆಟ್, ಐ.ಟಿ ಪಾರ್ಕ್ ಮುಂಭಾಗ ಸಾಗಿ ಹೂಸೂರ ವೃತ್ತದ ಕಡೆ ಹೋಗಬೇಕು. ಕಾಟನ್ ಮಾರ್ಕೆಟ್ ಮಾರ್ಗದ ಮೂಲಕ ಗದಗ ಹಾಗೂ ನವಲಗುಂದ ಕಡೆಗೆ ಹೋಗುವ ವಾಹನಗಳು ದೇಸಾಯಿ ತಿರುವು ಮುಖಾಂತರ ನವಲಗುಂದ ಕಡೆಗೆ ಸಾಗಬೇಕು. ದೇಸಾಯಿ ವೃತ್ತದಿಂದ ಪಿಂಟೊ ಪಾಯಿಂಟ್ ಕಡೆಗೆ ಯಾವುದೇ ವಾಹನಗಳನ್ನು ಬಿಡುವುದಿಲ್ಲ.
ಕಮರಿಪೇಟೆ ಠಾಣೆ ಮುಂದೆ: ಬೆಂಗಳೂರು ಕಡೆಯಿಂದ ಬಂದು ಧಾರವಾಡ ಕಡೆಗೆ ಹೋಗುವ ವಾಹನಗಳು ತೋರವಿ ಹಕ್ಕಲ, ಎಂ.ಟಿ ಮಿಲ್, ವಾಣಿ ವಿಲಾಸ ಕ್ರಾಸ್ ತಿರುವಿನ ಮೂಲಕ ಸಾಗಿ ಹೂಸೂರ ವೃತ್ತ ತಲುಪಬೇಕು. ಧಾರವಾಡ ಅಥವಾ ಕೆಟಿಸಿ ತಿರುವಿನ ಮುಖಾಂತರ ನವಲಗುಂದ ಅಥವಾ ಗದಗ ಕಡೆಗೆ ವಾಹನ ಹೋಗಲು ಅವಕಾಶ ಇಲ್ಲ.
ಲಕ್ಷ್ಮೀ ವೇ ಬ್ರಿಡ್ಜ್ ವೃತ್ತ: ದೇಸಾಯಿ ವೃತ್ತದ ಕಡೆಯಿಂದ ಬಂದಂತಹ ವಾಹನಗಳನ್ನು ಕೆ.ಸಿ ಸರ್ಕಲ್ ಕಡೆಗೆ ಬಿಡದೆ, ಶಾನಭಾಗ ಹಾಗೂ ಗಿರಣಿ ಚಾಳ, ಎಂ.ಟಿ ಮಿಲ್ ತಿರುವಿನ ಮುಖಾಂತರ ಬೆಂಗಳೂರು ಕಡೆಗೆ ಅಥವಾ ಧಾರವಾಡ ಕಡೆಗೆ ಬಿಡಲಾಗುತ್ತದೆ.
ಕಾರವಾರ ರಸ್ತೆ ಚೆಕ್ಪೋಸ್ಟ್: ಹಳೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಭಾಂದವರು ಪ್ರಾರ್ಥನೆ ಸಲ್ಲಿಸುವ ವೇಳೆ, ಕಲಘಟಗಿ ಕಡೆಯಿಂದ ಹಾಗೂ ಗ್ರಾಮೀಣ ಕಡೆಯಿಂದ ಬರುವಂತಹ ವಾಹನಗಳಿಗೆ ಇಂಡಿ ಪಂಪ್ ಕಡೆ ಹೋಗಲು ಅವಕಾಶ ನೀಡುವುದಿಲ್ಲ. ಆ ವಾಹನಗಳು ಬೈಪಾಸ್ ಮುಖಾಂತರ ಹೋಗಿ ತಾರಿಹಾಳ ಇಂಟರ್ಚೇಂಜ್ ಮುಖಾಂತರ ಗೋಕುಲ ರಸ್ತೆ ಪ್ರವೇಶಿಸಬಹುದು. ಬೆಂಗಳೂರು ಕಡೆಯಿಂದ ಬರುವಂತಹ ವಾಹನಗಳಿಗೂ ಸಹ ಬೈಪಾಸ ಮುಖಾಂತರ ಕಳುಹಿಸಿಕೊಡಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.